
ಮೈಸೂರು(ಮಾ.15): ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಈಗ ದ್ವಂದ್ವದಲ್ಲಿ ಸಿಲುಕಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟು ಬೇಗ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತೋ ಅಂತಾ ಕಾಯ್ತಿದ್ದಾರೆ ಎಂದರು.
ನ್ಯಾ. ನಾಗಮೋಹನ್ ದಾಸ್ ವರದಿ ಬಂದ ನಂತರ ಸಿಎಂ ಸುಮ್ಮನಾಗುತ್ತಿರೋದು ಸರಿಯಲ್ಲ. ಸಿದ್ದರಾಮಯ್ಯನವರ ಈ ನೀತಿ ಸರಿಯಾದುದ್ದಲ್ಲ. ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ವರದಿ ಬಂದಿದ್ದು, ಇದರಿಂದ ಸಿಎಂ ಹೆದರಿದ್ದಾರೆ. ಈ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಸೇರಿ ಹಲವರು ಸಿಎಂ ವಿರುದ್ಧವೇ ತಿರುಗಿಬಿದ್ದಿದ್ದು, ಪ್ರತ್ಯೇಕ ಧರ್ಮದ ವಿಚಾರಕ್ಕೆ ಆರಂಭದಲ್ಲಿ ಒತ್ತಾಸೆ ಮಾಡಿದ ಸಿಎಂ ಈಗ ಅಡಕತ್ತರಿಗೆ ಸಿಲುಕಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.
ಇನ್ನು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಿಎಂ ತಮಗಿಷ್ಟಬಂದಂತೆ ನಡೆದುಕೊಳ್ಳುತ್ತಿರೋದು ಸರಿಯಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸನ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ನಡೆಯಿಂದ ಅಧಿಕಾರಿಗಳ ನೈತಿಕ ಬಲವೇ ಕುಗ್ಗಿ ಹೋಗಿದೆ ಎಂದರು. ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಬಹಿರಂಗವಾಗಿ ಸರ್ಕಾರದ ವಿರುದ್ದವೇ ಪತ್ರ ಬರೆದಿರೋದೇ ಇದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಕೆಂಪಯ್ಯನೇ ಕಾರಣ ಎಂದು ಕಿಡಿಕಾರಿದರು.
ಸ್ವಜನ ಪಕ್ಷಪಾತದಿಂದಾಗಿ ಸಿದ್ದರಾಮಯ್ಯ ಕೆಂಪಯ್ಯ ಅವರನ್ನ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಮೂವರು ಗೃಹ ಸಚಿವರು ಬದಲಾದರೂ ಅಧಿಕಾರಿಗಳ ಆತ್ಮಸ್ಥೈರ್ಯ ತುಂಬಲು ಸಾಧ್ಯವಾಗಿಲ್ಲ ಎಂದರು. ಇನ್ನು ರಾಜರ ಆಡಳಿತಕ್ಕೆ ತಮ್ಮನ್ನು ಹೋಲಿಸಿಕೊಂಡ ಸಿಎಂ ನಡೆಗೆ ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದರು. ಜಿಲ್ಲಾ ಮಂತ್ರಿಯಾಗಿ ಮೈಸೂರಿಗೆ ನಾನು ರೂಪಿಸಿದ ಕಾರ್ಯಕ್ರಮಗಳ ಹೊರತು ಯಾವ ಹೊಸ ಕಾರ್ಯಕ್ರಮವನ್ನೂ ಸಿಎಂ ತಂದಿಲ್ಲ. ಹೀಗಿರುವಾಗ ಮೈಸೂರು ಅರಸರ ಆಡಳಿತಕ್ಕೆ ತಮ್ಮನ್ನ ಹೋಲಿಸಿಕೊಂಡಿರೋದು ಹಾಸ್ಯಾಸ್ಪದ. ಮುಖ್ಯಮಂತ್ರಿ ಉದ್ಘಾಟಿಸಿದ ಜಯದೇವ ಆಸ್ಪತ್ರೆ ಹೊರತಾಗಿ ಉಳಿದೆಲ್ಲವೂ ನನ್ನ ಅವಧಿಯಲ್ಲೇ ರೂಪಿತವಾಗಿದ್ದವು ಎಂದು ಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.