ಹುಬ್ಬಳ್ಳಿ(ಸೆ.24): ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ರಾಜ್ಯ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವೇ ಐತಿಹಾಸಿಕ ನಿರ್ಣಯ ಕೂಡಾ ಅಂಗೀಕರಿಸಿದ್ದಾಗಿದೆ. ಆದರೆ, ಇದೇ ಬದ್ಧತೆಯನ್ನು ರಾಜ್ಯ ಸರ್ಕಾರ ಮಹಾದಾಯಿಗೆ ಯಾಕೆ ತೋರಿಸಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರದಾಯಿತ್ವ ಯಾರದು ಎನ್ನುವ ಪ್ರಶ್ನೆಯನ್ನ ಜನರು ರಾಜ್ಯ ಸಕಾ೯ರದ ಮುಂದಿಟ್ಟಿದ್ದಾರೆ.
ಕಾವೇರಿ ಅನ್ಯಾಯದ ವಿರುದ್ಧ ಒಂದಾದ ರಾಜ್ಯದ ಜನ್ರು: ಕಾವೇರಿಗೆ ತೋರಿಸಿದ ಬದ್ಧತೆ ಮಹಾದಾಯಿಗ್ಯಾಕಿಲ್ಲ?
ಕಾವೇರಿ ನದಿ ತೀರದ ಜನರ ನೀರಿನ ಬವಣೆ ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಣಯ ಇದು. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಿಂತ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಲ್ಲಿ ಜನರ ಹಿತ ಕಾಯುವುದೇ ನಮ್ಮ ಧ್ಯೇಯ ಅಂತಾ ಸಾರಿ ಹೇಳಿದರು. ಆದರೆ, ವಿಶೇಷ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲು ಸಿದ್ಧರಾಗುತ್ತಿದ್ದಂತೆಯೇ ಉತ್ತರ ಕರ್ನಾಟಕದ ಜನರ ಮನಸ್ಸಿನಲ್ಲಿ ಮಹದಾಯಿಗೆ ಈ ಬದ್ಧತೆಯನ್ನು ಸರ್ಕಾರ ಯಾಕೆ ತೋರಿಸಿಲ್ಲ ಎಂದು ಸಣ್ಣದಾದ ಅಸಮಾಧಾನವೊಂದು ಮೊಳಕೆಯೊಡೆದಿದೆ.
ಕಾವೇರಿಗಾಗಿ ಬಹುತೇಕ ರಾಜ್ಯ ಹೊತ್ತಿ ಉರಿದಿತ್ತು. ಅದೇ ರೀತಿ, ಮಹಾದಾಯಿ ನೀರಿಗೆ ಆಗ್ರಹಿಸಿ ಕಳೆದೊಂದು ವರ್ಷದಿಂದ ಉತ್ತರ ಕರ್ನಾಟಕದ ರೈತರು ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಜೈಲುವಾಸ ಅನುಭವಿಸಿ ಬಂದಿದ್ದಾರೆ. ಇನ್ನೂ, ಕುಡಿಯುವ ನೀರಿಗಾಗಿ ಅವರ ಹೋರಾಟ ನಿಂತಿಲ್ಲ. ಅವರ ನೀರಿನ ಬವಣೆಯೂ ನೀಗಿಲ್ಲ. ಆದರೆ, ಇಷ್ಟಾದರೂ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹುಡುಕುವ ಗೋಜಿಗೇ ಹೋಗಿಲ್ಲ. ಕಾವೇರಿಯ ಜವಾಬ್ದಾರಿ ಹೊತ್ತ ಜನಪ್ರತಿನಿಧಿಗಳು ಮಹದಾಯಿಯ ಉತ್ತರದಾಯಿತ್ವವವನ್ನು ಮರೆತುಬಿಟ್ಟರಾ ಎಂದು ಪ್ರಶ್ನಿಸುತ್ತಿದ್ದಾರೆ.
ಕಾವೇರಿ ವಿಚಾರದಲ್ಲಿ ಒಮ್ಮತದ ಜನಾಭಿಪ್ರಾಯ ಮೂಡಿಸಿದ ಸರ್ಕಾರ, ನಮಗೂ ನ್ಯಾಯ ಕೊಡಿಸಲಿ. ಪೊಲೀಸರ ದೌರ್ಜನ್ಯದ ಗಾಯ ಇನ್ನೂ ಮಾಸಿಲ್ಲ. ಆಗಲೇ ಸರ್ಕಾರದಿಂದ ನಮಗೆ ಮತ್ತೆ ಅನ್ಯಾಯ ಆಗುತ್ತಿದೆ ಎನ್ನುವುದು ಕಳಸಾ ಹೋರಾಟಗಾರರ ಅಸಮಾಧಾನ. ಇನ್ನಾದರೂ ಸಕಾ೯ರ ಎಚ್ಚೆತ್ತು ಕಾವೇರಿ ವಿವಾದ ಬಗೆಹರಿಸಲು ತೋರುತ್ತಿರುವ ಮುತ್ಸದ್ದಿತನ, ಕಾಳಜಿಯನ್ನ ಕಳಸಾ ಬಂಡೂರಿಗೂ ತೋರಬೇಕಿದೆ. ಆಗ, ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ ಅಂತಾ ಉತ್ತರ ಕನಾ೯ಟಕ ಜನರ ಆರೋಪವನ್ನ ಸರ್ಕಾರ ತೊಡೆದು ಹಾಕಬೇಕಿದೆ.