'ಅಯೋಧ್ಯೆ ಬಗ್ಗೆ ಮಾತು ಆಡುವಾಗ ಹುಷಾರ್‌' ಸಚಿವರಿಗೆ ಸಿಎಂ ವಾರ್ನಿಂಗ್

By Kannadaprabha NewsFirst Published Nov 3, 2019, 11:50 AM IST
Highlights

ಅಯೋಧ್ಯೆ ವಿಚಾರವಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಿ ಶಾಂತಿ-ಸೌಹಾರ್ದತೆಗೆ ಭಂಗ ತರದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ. 

ನವದೆಹಲಿ(ನ.03): ಬಹುನಿರೀಕ್ಷೆಯ ಅಯೋಧ್ಯೆ ತೀರ್ಪು ಇನ್ನೇನು ಕೆಲ ದಿನಗಳಲ್ಲೇ ಹೊರ ಬೀಳಲಿರುವ ಹಿನ್ನೆಲೆಯಲ್ಲಿ ವಿವಾದಾತ್ಮಕ, ಅನಾವಶ್ಯಕ ಹೇಳಿಕೆಗಳನ್ನು ನೀಡಿ ಶಾಂತಿ-ಸೌಹಾರ್ದತೆಗೆ ಭಂಗ ತರದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಮ್ಮ ಸಚಿವರಿಗೆ ಸೂಚನೆ ನೀಡಿದ್ದಾರೆ. 

ಲಖನೌದ ಲೋಕಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌, ಕೆಲವೇ ದಿನಗಳಲ್ಲಿ ಅಯೋಧ್ಯೆ ತೀರ್ಪು ಬರಲಿದೆ. ಸುಖಾಸುಮ್ಮನೇ ವಿವಾದಿತ ಹೇಳಿಕೆ ನೀಡಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡದಿರಿ ಎಂದಿದ್ದಾರೆ.

ತೀರ್ಪು ಏನೇ ಬಂದರೂ ಅದನ್ನು ಸ್ವೀಕರಿಸಿ ಎಂದು ಸಲಹೆ ನೀಡಿದ್ದಾರೆ. ರಾಜಕೀಯವಾಗಿ ಸೂಕ್ಷ್ಮ ಪ್ರಕರಣವಾದ್ದರಿಂದ ಉತ್ತರ ಪ್ರದೇಶದಲ್ಲಿ ಈಗಾಗಲೇ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಪುಣ್ಯಕ್ಷೇತ್ರಗಳಿಗೆ ಬಿಗಿಭದ್ರತೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್‌ 30 ರವರೆಗೆ ಎಲ್ಲ ಅಧಿಕಾರಿಗಳ ರಜೆಯನ್ನು ರದ್ದು ಮಾಡಲಾಗಿದೆ. 

'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'...

ಶಾಂತಿ ಸಮಿತಿಗಳನ್ನು ರಚಿಸಿ ಅವುಗಳ ಮೂಲಕ ತೀರ್ಪು ಬಳಿಕ ಜನರು ಸೌಹಾರ್ದತೆ ಕಾಪಾಡಲು ತಿಳಿಹೇಳಲಾಗುತ್ತಿದೆ. ಮತ್ತೊಂದೆಡೆ ಅಖಲಿ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ತೀರ್ಪು ಕುರಿತಂತೆ ಸಮುದಾಯದವರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದೆ.

click me!