ರಾಜ್ಯದಲ್ಲಿ ಮಹಿಳಾ ಸುರಕ್ಷತೆಗಾಗಿ ರಚಿಸಲಾಗಿದ್ದ ಆ್ಯಂಟಿ ರೋಮಿಯೋ ಸ್ಕ್ಯಾಡ್ ಇದೀಗ ಮತ್ತೆ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಸಿಎಂ ಮಹಿಳಾ ಸುರಕ್ಷೆಗಾಗಿ ಮತ್ತೆ ಕೆಲಸ ಆರಂಭಿಸುವಂತೆ ಸೂಚಿಸಿದ್ದಾರೆ.
ಲಕ್ನೋ : ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಮತ್ತೆ ಆ್ಯಂಟಿ ರೋಮಿಯೋ ಸ್ಕ್ಯಾಡ್ ಕಾರ್ಯಪೃವೃತ್ತರಾಗಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.
ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿದವರು ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಗೃಹ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆ ಕರೆಯುವ ಮೂಲಕ ಮಹಿಳಾ ಸುರಕ್ಷೆಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳು ಹಾಗೂ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ.
ಆ್ಯಂಟಿ ರೋಮಿಯೋ ಸ್ಕ್ಯಾಡ್ ತಕ್ಷಣ ಸೂಕ್ಷ್ಮ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ವರ್ಷಾರಂಭವಾದ ಈ ಸಂದರ್ಣದಲ್ಲಿ ಶಾಲೆಗಳಲ್ಲಿ ಮಹಿಳಾ ಸುರಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಿಎಂ ಆದೇಶ ನೀಡಿದರು.
2017 ರಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಯೋಗಿ ಆದಿತ್ಯನಾಥ್ ಆ್ಯಂಟಿ ರೋಮಿಯೋ ಸ್ಕ್ಯಾಡ್ ರಚಿಸಿದ್ದರು. ಬಳಿಕ ನೈತಿಕ ಪೊಲೀಸ್ ಗಿರಿ ಆರೋಪದಲ್ಲಿ ಕೆಲಸ ನಿಲ್ಲಿಸಿತ್ತು.