ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಕೇರಳ- ಬೆಂಗಳೂರು ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನರ್ ಆರಂಭವಾಗಿದೆ. ಮಂಗಳೂರು ಮೂಲಕ ರೈಲು ಸಂಚಾರವನ್ನು ಆರಂಭಿಸಲಾಗಿದೆ.
ಮಂಗಳೂರು: ಮಂಗಳೂರು ಮೂಲಕ ಬೆಂಗಳೂರಿಗೆ ಕೇರಳ ಮಾರ್ಗವಾಗಿ ರೈಲು ಪ್ರಯಾಣ ಆರಂಭವಾಗಿದೆ. ಕಾರವಾರ- ಮಂಗಳೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (ನಂ. 16514/ 16512) ರೈಲು ಶೊರ್ನೂರು- ಪಾಲಕ್ಕಾಡ್-ತಿರುಪತ್ತೂರು ಜಂಕ್ಷನ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ.
ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್ (ನಂ.16528) ಸೋಮವಾರ ಸಂಜೆ 6.05ಕ್ಕೆ ಕಣ್ಣೂರು ನಿಲ್ದಾಣದಿಂದ ಪ್ರಯಾಣ ಆರಂಭಿಸಿದೆ. ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಮಂಗಳೂರು ಸೆಂಟ್ರಲ್ನಿಂದ ರಾತ್ರಿ 8.15ಕ್ಕೆ ಸಂಚಾರ ಆರಂಭಿಸಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 12.50ಕ್ಕೆ ಹೊರಡಬೇಕಾಗಿದ್ದ ಮಂಗಳೂರು ಸೆಂಟ್ರಲ್ ಲೋಕಮಾನ್ಯ ತಿಲಕ್ ಮುಂಬೈ ಮತ್ಸ್ಯಗಂಧ ಎಕ್ಸ್ಪ್ರೆಸ್ ತಡವಾಗಿ ಸಂಜೆ 4.30ಕ್ಕೆ ಮಂಗಳೂರು ಸೆಂಟ್ರಲ್ನಿಂದ ಸಂಚಾರ ಆರಂಭಿಸಿದೆ. ಕೊಚುವೆಲಿ-ಚಂಡೀಗಡ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ (ನಂ. 12217) ರಾತ್ರಿ 8.15ಕ್ಕೆ ಹಾಗೂ ಎರ್ನಾಕುಳಂ-ಹಝ್ರತ್ ನಿಜಾಮುದ್ದೀನ್ ಮಂಗಳ ಲಕ್ಷದ್ವೀಪ ಎಕ್ಸ್ಪ್ರೆಸ್ ರೈಲು ಸಂಜೆ 7.30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟಿದೆ.