
ಬೆಂಗಳೂರು(ನ.02): ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್ ಸುದ್ದಿ. ನಾಳೆಯಿಂದ ಎರಡು ದಿನಗಳ ಕಾಲ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಸರ್ಕಾರಿ ಸ್ವಾಮ್ಯದ 3 ತೈಲ ಕಂಪನಿಗಳಿಂದ ಇಂಧನವನ್ನು ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದೆ.
ಅಲ್ಲದೇ ನವೆಂಬರ್ 5ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಲಿದೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್ಗಳು ಕೇವಲ ಒಂದು ಪಾಳಿಯಲ್ಲಿ ತೆರೆದಿರಲಿವೆ.
ದೇಶದಲ್ಲೇ ಮೊದಲ ಬಾರಿಗೆ ಡೀಲರ್ಸ್ಗಳೆಲ್ಲ ಒಟ್ಟಾಗಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರಿ ರಜಾದಿನಗಳು, 2ನೇ ಶನಿವಾರ ಹಾಗೂ ಭಾನುವಾರ ಕೂಡ ಬಂಕ್ಗಳು ತೆರೆಯಲ್ಲ. ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಮುಷ್ಕರಕ್ಕೆ ರಾಜ್ಯದ ಡೀಲರ್ಗಳು ಬೆಂಬಲ ಸೂಚಿಸಿದ್ದಾರೆ. ತೈಲ ಕಂಪನಿಗಳು ಅನುಸರಿಸುತ್ತಿರುವ ಕ್ರಮ ಖಂಡಿಸಿ ಅ.19 ರ ರಾತ್ರಿ 7.15 ರವರೆಗೆ ಪೆಟ್ರೋಲ್ ಮಾರಾಟ ಸ್ಥಗಿತಗೊಳಿಸಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.
ಗ್ರಾಹಕರಿಗೆ ತೊಂದರೆಯಾಗದು :
ನ.3 ಮತ್ತು ನ.4 ರಂದು ತೈಲ ಖರೀದಿಯನ್ನಷ್ಟೇ ಬಂಕ್ಗಳು ಸ್ಥಗಿತಗೊಳಿಸುತ್ತಿವೆ. ಹೀಗಾಗಿ ಈ ಎರಡೂ ದಿನಗಳೂ ಬಂಕ್ಗಳಲ್ಲಿ ಸಂಗ್ರಹವಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.
ಆದರೆ ನ.5 ರಿಂದ ಪ್ರಾರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಬಹುದು. ಏಕೆಂದರೆ ಒಂದು ಪಾಳಿಯಲ್ಲಿ ಅಂದರೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಬಂಕ್ಗಳು ತೆರೆದಿರುವುದರಿಂದ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರ ಡೀಲರ್ಸ್ಗಳ ಮುಖಂಡರ ಸಭೆ ಕರೆದು ಬೇಡಿಕೆ ಈಡೇರಿಕೆ ಭರವಸೆ ನೀಡಿದರೆ ಮುಷ್ಕರ ನಡೆಯುವುದು ಅನುಮಾನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.