
ಚೆನ್ನೈ(ಮೇ.17): ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಹಾಗೂ ದೇವಾಲಯದ ಅರ್ಚಕರ ನಡುವೆ ಈಗ ‘ಕದನ’ ಅರಂಭವಾಗಿದೆ. ಟಿಟಿಡಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಅಶಿಸ್ತು ತುಂಬಿತುಳುಕುತ್ತಿದೆ ಎಂದು ಮುಖ್ಯ ಅರ್ಚಕ ಎ.ವಿ. ರಮಣ ದೀಕ್ಷಿತುಲು ಆರೋಪಿಸಿದ್ದಾರೆ.
‘ನಾವು ತಲೆತಲಾಂತರದಿಂದ ತಿಮ್ಮಪ್ಪನ ಪೂಜೆ ಮಾಡಿಕೊಂಡು ಬಂದವರು. ಪರಂಪರಾನುಗತವಾಗಿ ನಾವು ಅರ್ಪಣಾ ಮನೋಭಾವದಿಂದ ದುಡಿಯುತ್ತಿದ್ದೇವೆ. ಆದರೆ ಈಗ ನಾವು ನಿಸ್ಸಹಾಯಕರಾಗಿದ್ದೇವೆ. 1996ರವರೆಗೆ ನಾವೇ ತಿಮ್ಮಪ್ಪನ ಆಭಣಗಳ ಉಸ್ತುವಾರಿಯಾಗಿದ್ದೆವು. ಆದರೆ ಈಗ ಆಭರಣಗಳ ಮೇಲೆ ಟಿಟಿಡಿ ನಿಗಾ ವಹಿಸುತ್ತಿದೆ. ಬೆಲೆ ಕಟ್ಟಲಾಗದ ಈ ಹಳೆಯ ಆಭರಣಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ದೇವಾಲಯದ ಹಣಕಾಸು ವ್ಯವಹಾರ ಕೂಡ ಸೂಕ್ತವಾಗಿಲ್ಲ’ ಎಂದು ಆರೋಪಿಸಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಹೊಸ ಆಭರಣ ನೀಡಲಾಗುತ್ತಿದೆ. ಹಾಗಿದ್ದರೆ ಹಳೆಯ ಆಭರಣಗಳು ಎಲ್ಲಿ ಹೋದವು? ಈ ಬಗ್ಗೆ ಲೆಕ್ಕ ತಪಾಸಣೆ ನಡೆಯಬೇಕು. ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು ಹಾಗೂ ಎಲ್ಲ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ವಿಐಪಿ ದರ್ಶನದ ಹೆಸರಿನಲ್ಲಿ ಅಕ್ರಮಗಳು ನಡೆಯುತ್ತಿವೆ. ಪೂಜೆ-ಪುನಸ್ಕಾರಗಳನ್ನು ಸವಿಸ್ತಾರವಾಗಿ ಮಾಡದೇ ಕತ್ತರಿ ಪ್ರಯೋಗಿಸಲಾಗುತ್ತಿದೆ. ಅಧಿಕಾರಿಗಳಿಗೆ ಸಂಪ್ರದಯದ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಇದರಿಂದ ಭಕ್ತರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದೂ ಆವರು ಆಪಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.