
ಬೆಂಗಳೂರು(ಸೆ.20): ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಲೇ ಇದೆ. ಸೆ.5ರಂದು ಕರ್ನಾಟಕ ವಿರುದ್ಧ ಬಂದ ತೀರ್ಪು ರಾಜ್ಯಕ್ಕೆ ಬೆಂಕಿ ಇಟ್ಟಿದೆ. ಸಂಕಷ್ಟದಲ್ಲಿರೋ ರಾಜ್ಯ ಸರ್ಕಾರಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಇಂದು ಸುಪ್ರೀಂಕೋರ್ಟ್ನಲ್ಲೂ ಇದರ ಬಗ್ಗೆ ವಿಚಾರಣೆ ಇದೆ. ಸುಪ್ರೀಂಕೋರ್ಟ್ನಲ್ಲಿ ಏನಾಗುತ್ತೋ ಗೊತ್ತಿಲ್ಲ. ಆದ್ರೆ ಸೆ.5ರಿಂದ ಇದುವರೆಗೂ ಏನೇನಾಯಿತು? ಇಲ್ಲಿದೆ ವಿವರ
ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಪರ ತೀರ್ಪು ನೀಡಿದ ಕೋರ್ಟ್, ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಆದೇಶ ಕೊಟ್ಟಿತು. ಅಂದರೆ, ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಕಾವೇರಿ ಸೀಮೆಯಲ್ಲಿ ರೈತರು ಉಗ್ರ ಪ್ರತಿಭಟನೆ ಆರಂಭಿಸಿದರು. 2 ದಿನಗಳ ಕಾಲ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಯಿತು. ಮಂಡ್ಯ ರೈತರ ಸಿಟ್ಟಿಗೆ ಅಂಬಿ ಕಟೌಟ್ ಪೀಸ್ ಪೀಸ್ ಆಗಿತ್ತು. ಬಸ್, ಲಾರಿಗಳಿಗೆ ಕಲ್ಲು ತೂರಿದರು. KRSಗೆ ಮುತ್ತಿಗೆ ಹಾಕಲು ಬಂದ ರೈತರು ಅರೆಸ್ಟ್ ಆಗಿದ್ದರು.
ಸೆ.7ರಂದು ಕಾವೇರಿ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಕೃಷಿ ಭೂಮಿಗೆ ನೀರು ಒದಗಿಸುವ ಭರವಸೆ ನೀಡಿದರು. 2.92 ಲಕ್ಷ ಎಕರೆ ಬೆಳಗೆ ನೀರು ಒದಗಿಸಲು ಸಿಎಂ ಒಪ್ಪಿಗೆ ಸೂಚಿಸಿದರು.
ಇನ್ನು, ತಮಿಳುನಾಡಿಗೆ ನೀರು ಬಿಟ್ಟಿದ್ದನ್ನ ಖಂಡಿಸಿ ಸೆ.8ರಂದು ಕರ್ನಾಟಕ ಬಂದ್ ಆಚರಿಸಲಾಯಿತು. ಕನ್ನಡ ಪರ ಸಂಘಟನೆಗಳು ಆಚರಿಸಿದ ಬಂದ್'ಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸೆ.9ರಂದು ಕಾವೇರಿ ಕೊಳ್ಳದ ರೈತರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿತ್ತು.. ಇದನ್ನ ಖಂಡಿಸಿ ರೈತರು ಕೆ ಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ರು. ಇದರಿಂದ ಸಿಟ್ಟಿಗೆದ್ದ ರೈತರಿಬ್ಬರು ಆತ್ಮಹತ್ಯೆಗೂ ಯತ್ನಿಸಿದ್ರು.
ರಾಜ್ಯದಲ್ಲಿನ ಪ್ರತಿಭಟನೆಗಳಿಂದ ಒತ್ತಡಕ್ಕೆ ಒಳಗಾದ ರಾಜ್ಯ ಸರ್ಕಾರ, ಸೆಪ್ಟೆಂಬರ್ 05ರ ಆದೇಶ ಮಾರ್ಪಾಡು ಮಾಡುವಂತೆ ಸುಪ್ರೀಂ ಕೋರ್ಟ್ಗೆ ಕೋರಿತು. ಇರೋ ಭಾರ ಕಡಿಮೆ ಮಾಡಿ ಅಂತ ಸಲ್ಲಿಸಿದ್ದ ಅರ್ಜಿಗೆ ವ್ಯತಿರಿಕ್ತ ತೀರ್ಪು ಬಂತು. ರಾಜ್ಯದ ಅರ್ಜಿ ತಿರಸ್ಕರಿಸಿದ ದ್ವಿಸದಸ್ಯ ಪೀಠ, ಈ ಹಿಂದೆ ಹತ್ತು ದಿನಗಳ ಕಾಲ ನೀರು ಹರಿಸಿ ಎಂದಿದ್ದ ತೀರ್ಪನ್ನ ಮಾರ್ಪಡಿಸಿ, ಸೆ.20 ರವರೆಗೂ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿತು. ಈ ಮೂಲಕ ಇನ್ನೂ 4 ದಿನ ಹೆಚ್ಚುವರಿಯಾಗಿ ನೀರು ಹರಿಸಲು ಆದೇಶ ನೀಡಿದಂತಾಯ್ತು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ.
:
ಸೆ.12ರಂದು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೇ ನಡೆಯಿತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೂ ತಮಿಳುನಾಡು ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯ್ತು. ಗೋಲಿಬಾರ್'ನಲ್ಲಿ ಉಮೇಶ್ಗೌಡ ಎಂಬಾತ ಮೃತಪಟ್ಟ. ಸಂಜೆಯಿಂದಲೇ ನಿಷೇಧಾಜ್ಞೆ ಜಾರಿಯಾಯಿತು. 16 ಪ್ರದೇಶಗಳಲ್ಲೂ ಕರ್ಪ್ಯೂ ಜಾರಿಯಾಯಿತು.
ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ನಡೆಯಿತು. ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಕರ್ನಾಟಕ ನೀರು ಹರಿಸುತ್ತಿಲ್ಲ ಎಂದು ತಮಿಳುನಾಡು ಆರೋಪಿಸಿತು. ಹೀಗಾಗಿ ನೀರಿನ ಕುರಿತ ಸಮಗ್ರ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯ ಎಲ್ಲ ನಾಲ್ಕೂ ರಾಜ್ಯಗಳಿಗೆ ಸೂಚಿಸಿತ್ತು.
ಬೆಂಗಳೂರು ಗಲಾಟೆ ವೇಳೆ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಕುಮಾರ್ ಎಂಬಾತ ಮೃತಪಟ್ಟ.
ಸೆ.21 ತಿಂದ ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಆದೇಶ ನೀಡಿದೆ.
ಒಟ್ಟಿನಲ್ಲಿ ರಾಜ್ಯಕ್ಕೆ ಸೆ.5ರಿಂದ ಬರೀ ಅನ್ಯಾಯದ್ದೇ ಸುದ್ದಿ ಬಂದೆರಗುತ್ತಿದೆ. ಇಂದು ಸುಪ್ರೀಂಕೋರ್ಟ್ನಲ್ಲಿ ಕಾವೇರಿ ನೀರು ಹಂಚಿಕೆ ಬಗ್ಗೆ ಮತ್ತೆ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್ ಮತ್ತೆ ಏನು ಹೇಳುತ್ತೋ ಎನ್ನುವ ಆತಂಕ ರಾಜ್ಯದ ಸರ್ಕಾರಕ್ಕೆ ಇದೆ. ಈಗಲಾದ್ರೂ ನ್ಯಾಯ ಸಿಗುತ್ತದಾ ಎಂದು ಕಾದು ಕುಳಿತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.