
ತಿರುವನಂತಪುರ[ಆ.19]: ಶತಮಾನದ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯನ ಅಬ್ಬರ ಇನ್ನೂ ಮುಂದುವರಿದಿದ್ದು, ಜನಜೀವನ ಅಯೋಮಯವಾಗಿದೆ.
ಎರ್ನಾಕುಲಂ, ವಯನಾಡ್, ಕೊಯಿಕ್ಕೋಡ್ ಸೇರಿ ಬಹುತೇಕ ಜಿಲ್ಲೆಗಳು ಅಕ್ಷರಶಃ ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರೆದಿದೆ. ಇಲ್ಲಿಯವರೆಗೂ ತೊಂದರೆಯಲ್ಲಿ ಸಿಲುಕಿಕೊಂಡಿದ್ದ ವಿವಿಧ ಜಿಲ್ಲೆಗಳಿಂದ 7 ಲಕ್ಷ ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
400 ಕ್ಕೂ ಹೆಚ್ಚು ಮಂದಿ ಮೃತ
ಕಳೆದ 11 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಶವಗಳನ್ನು ಹೂಳಲೂ ಆಗದೇ, ಸುಡಲೂ ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಚ್ಚಿ, ಅಳುವಾ, ಇಡುಕ್ಕಿಯ ವಂಡಿಪೆರಿಯಾರ್ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಹಪೀಡಿತರಿಗೆ ಆಹಾರ ಪೊಟ್ಟಣ, ಔಷಧ, ಅಗತ್ಯವಸ್ತುಗಳನ್ನು ಪೂರೈಸಲಾಗುತ್ತಿದೆ. ಪ್ರಾರ್ಥನಾ ಮಂದಿರ, ಶಾಲಾ-ಕಾಲೇಜು, ಆಸ್ಪತ್ರೆ ಕಟ್ಟಡಗಳಲ್ಲೇ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಆಪರೇಷನ್ ಮದದ್
ಭೀಕರ ಪ್ರವಾಹದಲ್ಲಿ ಸಿಲುಕಿರೋ ಕೇರಳದ ಜನತೆಯ ರಕ್ಷಣೆಗೆ ರಕ್ಷಣಾಪಡೆಗಳು ‘ಆಪರೇಷನ್ ಮದದ್’ ಹೆಸರಿನಲ್ಲಿ ಜೀವದ ಹಂಗು ತೊರೆದು ನಿಂತಿವೆ. NDRF, ವಾಯುಸೇನಾಪಡೆ, ನೌಕಾಪಡೆಯ ರಕ್ಷಣಾ ತಂಡಗಳು ಜೆಮಿನಿ ಬೋಟ್, 72 ಈಜು ತಜ್ಞರ ತಂಡಗಳು, 22 ಹೆಲಿಕಾಪ್ಟರ್, 119 ದೋಣಿಗಳ ಮೂಲಕ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.