
ಬೆಂಗಳೂರು (ಡಿ.13): ಆಕೆ ಹಿಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ಓಡಾಡಿದ ತಾಯಿ, ತವರೂರಿನ ಜನರ ಪ್ರೀತಿ ಅಭಿಮಾನಕ್ಕೆ ತವರೂರಿನಲ್ಲೇ ಬಂದು ನೆಲೆ ನಿಂತವರು. ಆಕೆಗೀಗ ಬರೋಬ್ಬರಿ 106 ವರ್ಷ. ಆದ್ರೆ ಇದೀಗ ಕಳೆದ 40 ದಿನಗಳಿಂದ ಅನ್ನ ಆಹಾರವಿಲ್ಲದೆ ಉಪವಾಸವಿದ್ದು, ಕೊನೆ ದಿನಗಳನ್ನ ಎಣಿಸುತ್ತಿದ್ದಾರೆ.
ಹಾಸಿಗೆ ಹಿಡಿದಿರೋ ಶತಾಯುಷಿ ಅಜ್ಜಿ, ಸದಾ ಅಜ್ಜಿಯ ಆರೈಕೆಯಲ್ಲಿರೋ ಮಕ್ಕಳು, ಮೊಮ್ಮಕ್ಕಳು, ಅಜ್ಜಿಯ ಆಸೆಯಂತೆ ಸ್ವಾಮೀಜಿಗಳ ಸಮ್ಮುಖದಲ್ಲಿ ಸಮಾಧಿಗೆ ಸಿದ್ದತೆ ನಡೆಯುತ್ತಿದೆ. ಇಂತಹದೊಂದು ಅಪರೂಪದ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಉಪನಾಳ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ ಹಿರೇಮಠ ಅವರು ತವರೂರಿನ ಮಠವೊಂದಕ್ಕೆ ಸ್ವಾಮೀಜಿಗಳು ಇಲ್ಲವಾದಾಗ ತನ್ನ ಪತಿ ಘನಮಠದಯ್ಯ ಸಹಿತ ಉಪನಾಳದಲ್ಲಿ ಬಂದು ನೆಲೆಸಿದರು. ಹಿಂದೆ ಸ್ವಾತಂತ್ರ್ಯ ಹೋರಾಟ ಚಳುವಳಿಯಲ್ಲೂ ಪಾಲ್ಗೊಂಡಿದ್ದರು. ಇದೀಗ 106 ವರ್ಷ ತುಂಬಿರೋ ಶತಾಯುಷಿ ಅಜ್ಜಿ, ಕಳೆದ 40 ದಿನಗಳಿಂದ ಅನ್ನ , ಆಹಾರವಿಲ್ಲದೆ ಉಪವಾಸದ ಮೊರೆ ಹೋಗಿದ್ದಾರೆ.
ಶತಾಯುಷಿ ಅಜ್ಜಿ ಪಾರ್ವತಮ್ಮಳ ಆಶಯದಂತೆ ಅವರಿಗೆ ಸೇರಿದ ಹೊಲದಲ್ಲೇ ಸಮಾಧಿಯನ್ನ ಗುರುತಿಸಲಾಗಿದೆ. ಅಜ್ಜಿಯ ಆಸೆಯನ್ನ ಪೂರೈಸಲು ಮನೆಯವರು ಕೂಡಾ ಸಜ್ಜಾಗಿದ್ದಾರೆ. ಕೇವಲ 50 ರಿಂದ 60 ವರ್ಷ ಬಾಳುವುದೇ ಕಷ್ಟವಾಗಿರೋವಾಗ ಅಜ್ಜಿಯೊಬ್ಬರು 106 ವರ್ಷ ಬದುಕಿ ಅಚ್ಚರಿ ಮೆರೆದಿರೋದು ನಿಜಕ್ಕೂ ಅಭಿಮಾನದ ಸಂಗತಿ ಅಂತಾರೆ ಸ್ಥಳೀಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.