
ಹರಿಯಾಣ (ಸೆ. 11): ‘ಹರಿಯಾಣ ಮತ್ತಿತರ ಜಿಲ್ಲೆಗಳಲ್ಲಿ 15-20 ಜನರ ಕ್ರೂರಿ ಗುಂಪೊಂದು ಓಡಾಡುತ್ತಿದೆ. ಅವರೊಂದಿಗೆ ಮಕ್ಕಳೂ ಇದ್ದಾರೆ. ಅವರು ರಾತ್ರಿಹೊತ್ತು ಮಕ್ಕಳು ಅತ್ತಂತೆ ಶಬ್ದ ಮಾಡುತ್ತಾರೆ. ಆಗ ದಯವಿಟ್ಟು ಬಾಗಿಲು ತೆಗೆದು ಹೊರಹೋಗಬೇಡಿ. ಅವರಲ್ಲಿ ಆಯುಧಗಳಿವೆ. ಈ ಸಂದೇಶವನ್ನು ದೇಶಾದ್ಯಂತ ಸಾಧ್ಯವಾದಷ್ಟು ಜನರಿಗೆ ಕಳುಹಿಸಿ. ಇದನ್ನು ಹರಿಯಾಣ ಪೊಲೀಸರೇ ಕಳುಹಿಸಿದ್ದಾರೆ’ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂದೇಶದೊಂದಿಗೆ ಮೇಕೆಯ ರೀತಿಯ ಮನುಷ್ಯನೊಬ್ಬ ಯಾರನ್ನೋ ಕೊಲೆ ಮಾಡಿದಂತಹ ಅಸ್ಪಷ್ಟ ವಿಡಿಯೋವಿದೆ. ಈ ಹಿಂದೆ ಕೂಡ ಗೋಟ್ಮ್ಯಾನ್ ಹಲವರನ್ನು ಕೊಲೆ ಮಾಡಿದ್ದಾಗಿ ಹೇಳಿದ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ನಿಜಕ್ಕೂ ಹರಿಯಾಣದಲ್ಲಿ 15-20 ಜನರ ಗುಂಪು ರಾತ್ರಿ ವೇಳೆ ಜನರನ್ನು ಕೊಲ್ಲುತ್ತಿದೆಯೇ ಎಂದು ಪರಿಶೀಲಿಸಿದಾಗ, ಇದು ಸುಳ್ಳು ಸುದ್ದಿ, ಚಿತ್ರಕಾರರೊಬ್ಬರು ಬಿಡಿಸಿದ್ದ ಚಿತ್ರವನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ ಎಂಬ ಅಂಶ ಬಯಲಾಗಿದೆ.
ಈ ಚಿತ್ರದ ಜಾಡು ಹಿಡಿದು ಹೊರಟಾಗ ‘ಡಿವೈನ್ ಆರ್ಟ್’ ವೆಬ್ಸೈಟ್ ನಿಂದ ಪಡೆದುಕೊಂಡಿದ್ದು ಪತ್ತೆಯಾಗಿದೆ. ಆ ವೆಬ್ಸೈಟ್ನಲ್ಲಿ ಈಗ ವೈರಲ್ ಆಗಿರುವ ಚಿತ್ರ ಇದ್ದು ಅದರಲ್ಲಿ, ‘ಅತಿ ಹೆಚ್ಚು ಪ್ರಚಾರವಾದ ನನ್ನ ಕಲೆ’ ಎಂದು ವಿವರಣೆ ಬರೆಯಲಾಗಿತ್ತು. ಬೂಮ್ ಆ ಕಲಾವಿದರನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಿದ್ದು, ಸ್ಪರ್ಧೆಯ ಸಲುವಾಗಿ 2011 ರಲ್ಲಿ ಬಿಡಿಸಲಾಗಿದ್ದ ಡಿಜಿಟಲ್ ಚಿತ್ರವದು. ಆದರೆ ಆಗಿನಿಂದಲೂ ಹಲವರು ನನ್ನ ಅನುಮತಿ ಇಲ್ಲದೇ ಆ ಚಿತ್ರವನ್ನು ಸಾಮಾಜಿಕ ಮಾಧ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದು ಜನರಲ್ಲಿ ಭೀತಿ ಹುಟ್ಟಿಸಿದೆ’ ಎಂದಿದ್ದಾರೆ. ಹಾಗಾಗಿ ಈ ಸುದ್ದಿಯೇ ಸುಳ್ಳು.
-ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.