‘ಗಾಂಧಿಜೀ ಇದ್ದಿದ್ರೆ ಅವ್ರನ್ನೂ ಮೋದಿ ಒಳಗಾಗ್ತಿದ್ರು’!

By Web DeskFirst Published Aug 29, 2018, 11:08 AM IST
Highlights

ಹೋರಾಟಗಾರರ ಬಂಧನಕ್ಕೆ ರಾಮಚಂದ್ರ ಗುಹಾ ಆಕ್ರೋಶ! ಗಾಂಧಿಜೀ ಬದುಕಿದ್ದರೆ ಅವರನ್ನೂ ಸರ್ಕಾರ ಬಂಧಿಸುತ್ತಿತ್ತು! ಮೋದಿ ಅವರದ್ದು ಕ್ರೂರ, ಸರ್ವಾಧಿಕಾರಿ ಕ್ರಮ ಎಂದ ಗುಹಾ! ಬುಡಕಟ್ಟು ಹೋರಾಟಗಳಿಗೆ ಧ್ವನಿ ಇಲ್ಲದಂತೆ ಮಾಡುವ ಉದ್ದೇಶ! ಕಾರ್ಪೊರೇಟ್ ಕುಳಗಳಿಗೆ ನೆರವಾಗಲು ಬಂಧನದ ನಾಟಕ  

ನವದೆಹಲಿ(ಆ.29): ದೇಶಾದ್ಯಂತ ನಡೆದ ಮಾನವ ಹಕ್ಕು ಹೋರಾಟಗಾರರ ಮೇಲಿನ ದಾಳಿಯನ್ನು ಕಟುವಾಗಿ ಖಂಡಿಸಿರುವ ಖ್ಯಾತ ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ, ಗಾಂಧಿಜೀ ಇದಿದ್ದರೆ ಅವರನ್ನೂ ಕೂಡ ಸರ್ಕಾರ ಬಂಧಿಸುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರರ ಮೇಲಿನ ದಾಳಿಯನ್ನು ಕ್ರೂರ, ಸರ್ವಾಧಿಕಾರಿ, ದಬ್ಬಾಳಿಕೆಯ, ಕ್ರಮ ಎಂದು ಜರೆದಿರುವ ಗುಹಾ,  ಈ ದಬ್ಬಾಳಿಕೆಯನ್ನು ಪ್ರಜಾಪ್ರಭುತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಬುಡಕಟ್ಟುಗಳ ಜಾಗವನ್ನು ಕಬಳಿಸಲು, ಕಾಡು ಹಾಗು ಖನಿಜ ಸಂಪನ್ಮೂಲಗಳನ್ನು ದೋಚಲು ಕಾರ್ಪೋರೇಟ್ ಸಂಸ್ಥೆಗಳು ಮುಂದಾಗಿವೆ. ಆದರೆ ಇವರ ಈ ಪ್ರಯತ್ನಕ್ಕೆ ಹೋರಾಟಗಾರರು ಅಡ್ಡಿಯಾಗಿದ್ದು, ಇದೇ ಕಾರಣಕ್ಕೆ ಅವರ ಮೇಲೆ ದಾಳಿ ಮತ್ತು ಬಂಧನಗಳಾಗುತ್ತಿವೆ ಎಂದು ಗುಹಾ ಆರೋಪಿಸಿದರು. 

ಹೋರಾಟಗಾರರ ಬಂಧನದ ಹಿಂದೆ  ಬುಡಕಟ್ಟುಗಳಿಗೆ ಪ್ರತಿನಿಧಿಗಳು ಇಲ್ಲದಂತೆ ಮಾಡುವ ಉದ್ದೇಶ ಇದೆಯೇ ಹೊರತು ಇನ್ನೇನಲ್ಲ ಎಂದು ಗುಹಾ ಕಿಡಿಕಾರಿದರು. 

'ಬಂಧನಕ್ಕೊಳಗಾದವರಲ್ಲಿ ಕೆಲವರ ಪರಿಚಯ ತನಗಿದೆ. ಎಲ್ಲಾ ವಿಷಯದಲ್ಲೂ ತಾನು ಅವರೊಂದಿಗೆ ಸಹಮತ ಹೊಂದಿರಲಿಲ್ಲ. ಹಿಂಸೆಯ ಬಗ್ಗೆ ಅವರು ಪ್ರಚೋದನೆಯೂ ನೀಡಿರಲಿಲ್ಲ ಎಂದು ಗುಹಾ ಅಭಿಪ್ರಾಯಪಟ್ಟಿದ್ದಾರೆ. 

ಇಂದು ಮಹಾತ್ಮಾ ಗಾಂಧಿ ಬದುಕಿದ್ದರೆ, ಸುಧಾ ಭಾರದ್ವಾಜ್ ರನ್ನು ನ್ಯಾಯಾಲಯದಲ್ಲಿ ಬೆಂಬಲಿಸುತ್ತಿದ್ದರು ಎಂದು ನಾನು ಗಾಂಧಿಜೀಯ ಆತ್ಮಚರಿತ್ರೆಕಾರನಾಗಿ ಹೇಳಬಲ್ಲೆ. ಆದರೆ ಮೋದಿ ಸರ್ಕಾರ ಅವರನ್ನೂ ವಶಕ್ಕೆ ಪಡೆದು ಬಂಧಿಸುತ್ತಿತ್ತು ಎಂದು ಗುಹಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

click me!