
ಮೈಸೂರು(ಎ.05): ಎರಡೂ ಕ್ಷೇತ್ರಗಳ ಉಪಚುನಾವಣೆ ರಾಜ್ಯ ಬಿಜೆಪಿಯ ನಾಯಕರು ಗಂಭೀರವಾಗಿ ಪರಿಗಣಿಸಿ ಗೆಲುವಿಗಾಗಿ ಕಾರ್ಯೋನ್ಮುಖರಾಗಿದ್ದಾರೆ. ಈ ಚುನಾವಣೆಯ ಗೆಲುವು ಬಿಜೆಪಿಯಲ್ಲಿ ಎಲ್ಲರಿಗಿಂತ ಬಹುಮುಖ್ಯವಾಗಿ ಬೇಕಾಗಿರೋದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಾಲಿಗೆ. ಯಾಕೆಂದರೆ ಇದು ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ನಡೆಯುತ್ತಿರುವ ಉಪಸಮರ. ಹೀಗಾಗಿ ಯಡಿಯೂರಪ್ಪ ತಮ್ಮ ಅಧ್ಯಕ್ಷತೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅನ್ನುತ್ತಿರುವುದು ಕೇವಲ ಘೋಷಣೆಯಲ್ಲ ಅಂತ ಸಾಬೀತು ಮಾಡಬೇಕಿದೆ. ಯಡಿಯೂರಪ್ಪ ಶಕ್ತಿ ಅರಿಯಲೆಂದೇ ಬಿಜೆಪಿ ಹೈಕಮಾಂಡ್ ನಾಯಕರು ಯಡಿಯೂರಪ್ಪ ಹೇಳಿದ ಇಬ್ಬರು ಅಭ್ಯರ್ಥಿಗಳಿಗೇ ಟಿಕೆಟ್ ನೀಡಿದ್ದಾರೆ.
ಬಿಎಸ್'ವೈಗೆ ಅಗ್ನಿ ಪರೀಕ್ಷೆ
ಒಂದು ವೇಳೆ ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಮುಂದೆ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವೇಳೆ ಅಖಂಡ ಕರ್ನಾಟಕದ ಎಲ್ಲ ಭಾಗಗಳಲ್ಲೂ ಯಡಿಯೂರಪ್ಪ ಮಾತಿಗೆ ಕಿಮ್ಮತ್ತು ಹೆಚ್ಚೇ ಸಿಗಲಿದೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲೂ ಸೋತರೆ ಆ ಕಿಮ್ಮತ್ತು ಕಡಿಮೆಯಾಗಬಹುದು. ಏಕೆಂದರೆ ಉತ್ತರ ಕರ್ನಾಟಕದ ಭಾಗಗಳ ಅಭ್ಯರ್ಥಿಗಳ ಆಯ್ಕೆ ತಮ್ಮ ನಿರ್ಧಾರದಂತೆ ಆಗಬೇಕೆಂಬ ಪಟ್ಟು ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ ಜೋಷಿ ಮುಂದಿಡುವ ಸಾಧ್ಯತೆ ಇದೆ. ಹಾಗೆಯೇ ಬೆಂಗಳೂರಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಅನಂತಕುಮಾರ್ ಹಾಗೂ ಅಶೋಕ್ ಕೈಮೇಲಾಗಲಿದೆ. ಈ ದೃಷ್ಟಿಯಿಂದ ಈ ಚುನಾವಣಾ ಫಲಿತಾಂಶ ರಾಜ್ಯ ಬಿಜೆಪಿಯ ನಾಯಕರಿಗೂ ಬಹುಮುಖ್ಯ.
ಇಷ್ಟನ್ನು ಹೊರತುಪಡಿಸಿದರೆ ರಾಜ್ಯ ಬಿಜೆಪಿಯಲ್ಲಿ ಮತ್ಯಾವ ಮಹತ್ತರ ಬದಲಾವಣೆ ಸಾಧ್ಯತೆಗಳಿಲ್ಲ. ಸೆಮಿಫೈನಲ್ಸ್ ಎಂದೇ ಬಿಂಬಿತವಾಗಿರುವ ಉಪಸಮರದ ಫಲಿತಾಂಶ ಮುಂದಿನ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪ್ರಸ್ತುತತೆಗೆ ಉತ್ತರವಾಗಲಿದೆ.
ವರದಿ: ವೀರೇಂದ್ರ ಉಪ್ಪುಂದ., ಪೊಲಿಟಿಕಲ್ ಬ್ಯೂರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.