ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತೃತೀಯ ಲಿಂಗಿ ನಾಪತ್ತೆ

By Web DeskFirst Published Nov 28, 2018, 2:05 PM IST
Highlights

ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯುತ್ತಿದ್ದು ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗಲೇ ಅಭ್ಯರ್ಥಿಯೋರ್ವರು ನಾಪತ್ತೆಯಾಗಿದ್ದಾರೆ. ಸಿಪಿಐಎಂ ನಿಂದ ಸ್ಪರ್ಧೆ ಮಾಡಿದ ಮಂಗಳಮುಖಿ ಕಾಣೆಯಾಗಿದ್ದು, ಅಪಹರಣ ಶಂಕೆ ವ್ಯಕ್ತವಾಗಿದೆ. 

ಹೈದ್ರಾಬಾದ್ : ತೃತೀಯ ಲಿಂಗಿಗಳಿಗೆ ಸಮಾನ ಸ್ಥಾನಮಾನ ನೀಡುತ್ತಿರುವ ಬೆನ್ನಲ್ಲೇ, ಈ ವರ್ಗಕ್ಕೆ ಸೇರಿದವರೊಬ್ಬರು ತೆಲಂಗಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ನಾಮಪತ್ರವೂ ಸಲ್ಲಿಸಿಯಾಗಿತ್ತು. ಆದರೀಗ ದಿಢೀರ್ ನಾಪತ್ತೆಯಾಗಿದ್ದಾರೆ!

ಡಿಸೆಂಬರ್ 7ರಂದು ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಅಭ್ಯರ್ಥಿಯೊಬ್ಬರು ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಗೋಶಮಾಲ ಕ್ಷೇತ್ರದಲ್ಲಿ ಮಂಗಳಮುಖಿಯಾಗಿರುವ ಚಂದ್ರಮುಖಿ ಸಿಪಿಎಂ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೀಗ ಅವರು ತಮ್ಮ ಮನೆಯಿಂದಲೇ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

2 ದಿನಗಳ ಹಿಂದಷ್ಟೇ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೇ ಕಾರಣದಿಂದ ಅವರು ಅಪಹರಣಕ್ಕೆ ಒಳಗಾಗಿರಬಹುದು ಎಂದು ಆಪ್ತರು ಶಂಕಿಸಿದ್ದು, ದೂರು ಸಹ ದಾಖಲಾಗಿದೆ. 

ಅವರ ಮೊಬೈಲ್ ಕೂಡ ನಾಟ್ ರೀಚೆಬಲ್ ಆಗಿದ್ದು, ತಾಯಿಯೂ ಆತಂಕ ವ್ಯಕ್ತಪಡಿಸಿದ್ದಾರೆ. ಬಂಜಾರ ಹಿಲ್ ಠಾಣೆಯಲ್ಲಿ ದಾಖಲಿಸಿದ್ದು, ದೂರಿನನ್ವಯ ಪ್ರಕರಣ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು. ಎಸ್‌ಐ ಆರ್. ಗೋವಿಂದ ರೆಡ್ಡಿ ಹೇಳಿದ್ದಾರೆ. 

ಈ ಹಿಂದೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಚಂದ್ರಮುಖಿ ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಡಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ನೆರವಾಗಿದ್ದರು. ಅವರ ಸಮಾಜ ಮುಖಿ ಹೋರಾಟಗಳಿಂದಾಗಿಯೇ ಅವರಿಗೆ ಸಿಪಿಎಂ ಟಿಕೆಟ್ ನೀಡಿತ್ತು.

click me!