
ಬೆಂಗಳೂರು(ಅ.18): ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರ ಹೇಳಿಕೆ ಸುಳ್ಳು ಎಂದಿದ್ದಾರೆ ಟೆಕ್ಕಿ ನಂದಿನಿ.
ಆಯುಕ್ತ ಸುನೀಲ್ ಕುಮಾರ್ ಅವರು ಅಕ್ರಮ ಕಸಾಯಿಖಾನೆ ವಿರುದ್ಧ ದೂರು ನೀಡಿದ ಕಾರಣಕ್ಕಾಗಿ ಹಲ್ಲೆ ನಡೆದಿಲ್ಲ ಅಪಘಾತ ನಡೆಸಿದ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೆಕ್ಕಿ ನಂದಿನಿ 'ನಾನು ಅಪಘಾತ ಮಾಡಿದ ಕಾರಣಕ್ಕೆ ದಾಳಿ ನಡೆದಿದೆ ಎನ್ನುವುದು ಸಂಪೂರ್ಣ ಸುಳ್ಳು. ಅದಾಗಲೇ ತಮ್ಮ ಮೇಲೆ ಗುಂಪು ನಡೆದಿತ್ತು. ತಮ್ಮನ್ನು ಕೊಲೆ ಮಾಡುವುದಕ್ಕಾಗೇ ದಾಳಿ ನಡೆಯುತ್ತಿತ್ತು. ಆ ಗುಂಪಿನ ದಾಳಿಯಿಂದ ತಪ್ಪಿಸಿಕೊಂಡು ಪ್ರಯತ್ನಿಸಿದಾಗ ಕಂಬಕ್ಕೆ ಡಿಕ್ಕಿ ಹೊಡೆದಿದ್ದೆ.
ಗೋವುಗಳನ್ನು ಸಾಗಿಸಿರುವ ಬಗ್ಗೆ ದೂರು ನೀಡಲು ಹೋದಾಗ 15 ಜನ ಪೊಲೀಸರು ಸ್ಥಳದಲ್ಲಿ ಇದ್ದಾರೆಂದು ಠಾಣೆಯಲ್ಲಿ ಹೇಳಿದ್ದರು. ನೀವು ಅಲ್ಲಿಗೆ ಹೋಗಿ ಅಂತ ಹೇಳಿದ್ದರು. ಆದರೆ ಪೊಲೀಸ್ ರಕ್ಷಣೆ ಇಲ್ಲದೆ ಹೇಗೆ ಹೋಗಲಿ ಅಂತ ಪ್ರಶ್ನೆ ಮಾಡಿದ್ದೇವೆ. ಆಗ ನಮ್ಮ ಜತೆ ಕೇವಲ ಇಬ್ಬರು ಪೇದೆಗಳನ್ನು ಕಳಿಸಿದ್ದರು. ದಾಳಿ ವೇಳೆ ಪೇದೆಗಳಿಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.
ಅವರ ಪೊಲೀಸ್ ಹೆಲ್ಮೆಟ್ ನಮ್ಮ ಕಾರಲ್ಲೇ ಇತ್ತು. ಹಸುಗಳನ್ನು ರಕ್ಷಿಸಿದ್ದಾರೋ ಇಲ್ಲವೋ ಎಂದು ಪೊಲೀಸರ ಕೆಲಸವನ್ನು ನೋಡಲು ನಾವು ಹೋಗಿಲ್ಲ. ಗೋಹತ್ಯೆ ಮಾಫಿಯಾದ ವಿರುದ್ಧ ದೂರು ಕೊಟ್ಟ ಕಾರಣಕ್ಕಾಗಿ ದಾಳಿಯಾಗಿದೆ. ದೂರು ಕೊಟ್ಟಾಗ ಅಲ್ಲಿದ್ದ ಮೂರು ಹಸುಗಳೇ ಬೇರೆ, ಪೊಲೀಸರು ರಕ್ಷಿಸಿದ ಹಸುಗಳೇ ಬೇರೆ. ಪೊಲೀಸರು ಪ್ರಕರಣವನ್ನು ದಾರಿ ತಪ್ಪಿಸುತ್ತಿದ್ದಾರೆ. ಪೊಲೀಸ್ ತನಿಖೆಯಲ್ಲಿ ತನಗೆ ಯಾವ ವಿಶ್ವಾಸವೂ ಇಲ್ಲ. ಅಲ್ಲಿ ಕ್ಯಾಟಲ್ ಮಾಫಿಯಾ ನಡೆಯುತ್ತಿರೋದು ಸತ್ಯ. ಕೇವಲ ಅಪಘಾತಕ್ಕೆ ಇಷ್ಟೆಲ್ಲಾ ದೊಡ್ಡ ಗಲಾಟೆ ನಡೀತು ಅನ್ನೋದು ಸುಳ್ಳು. ಪೊಲೀಸರು ನನ್ನ ಬಳಿ ಇದ್ದದ್ದಕ್ಕೆ ಸಾಕ್ಷಿಯಿದೆ' ಎಂದು ನಂದಿನಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.