
ಬೆಳಗಾವಿ: ರಕ್ತ ಸಂಬಂಧಿಗಳನ್ನು ಮದುವೆಯಾದ್ರೆ ಹುಟ್ಟುವ ಬಹುತೇಕ ಮಕ್ಕಳು ಬುದ್ದಿಮಾಂದ್ಯರಾಗುತ್ತಾರೆ ಎಂಬುವುದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಬೆಳಗಾವಿ ಗ್ರಾಮವೊಂದರಲ್ಲಿ ರಕ್ತ ಸಂಬಂಧಿಗಳನ್ನೇ ಮದುವೆಯಾಗಿದ್ದಕ್ಕೆ, 50ಕ್ಕೂ ಹೆಚ್ಚು ಬುದ್ದಿ ಮಾಂದ್ಯ ಮಕ್ಕಳು ಜನಿಸಿವೆ.
ಇದೀಗ, ಮೌಢ್ಯ ನಂಬಿಕೆಯ ವಿರುದ್ಧ ಅಲ್ಲಿನ ಶ್ರೀಗಳ ನೇತೃತ್ವದಲ್ಲಿ ಜನಜಾಗೃತಿ ಕಾರ್ಯ ನಡೆಯುತ್ತಿದೆ. ಈ ರೀತಿ ಒಂದೇ ಗ್ರಾಮದಲ್ಲಿ 50ಕ್ಕೂ ಹೆಚ್ಚು ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳು ಕಂಡು ಬಂದಿರುವುದು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಶಿ ಗ್ರಾಮದಲ್ಲಿ. ಪ್ರಸಿದ್ದ ದುರದುಂಡೇಶ್ವರ ಮಠ ಇರುವ ಈ ಗ್ರಾಮದಲ್ಲಿ, ಜನರು ಮೌಢ್ಯದಿಂದ ಹೊರಬಂದಿಲ್ಲ.
ಗ್ರಾಮದಲ್ಲಿ ಬಹುತೇಕ ಜನ ರಕ್ತ ಸಂಬಂಧಿಗಳನ್ನೇ ಮದುವೆಯಾಗುತ್ತಾ ಬಂದಿದ್ದಾರೆ. ತಮ್ಮ ಮಕ್ಕಳನ್ನು ಬೇರೆ ಊರಿಗೆ ಮದುವೆ ಮಾಡಿ ಕೊಟ್ಟರೆ ಮಕ್ಕಳು ಸುಖವಾಗಿ ಇರುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ, ರಕ್ತ ಸಂಬಂಧಿಗಳಲ್ಲೇ ಮದುವೆ ಮಾಡಿಸುತ್ತ ಬಂದಿದ್ದಾರೆ. ಪರಿಣಾಮ ಗ್ರಾಮದಲ್ಲಿ ಇಷ್ಟೊಂದು ಬುದ್ದಿಮಾಂದ್ಯ ಮಕ್ಕಳು ಜನಿಸಿವೆ.
ಇನ್ನು ಈ ಗ್ರಾಮದ ಪರಿಸ್ಥಿತಿಯನ್ನು ಮನಗಂಡ ನಿಡಸೋಶಿಯ ದುರದುಂಡೇಶ್ವರ ಮಠದ ಸ್ವಾಮೀಜಿ ಎಬಿವಿಪಿ ಕಾರ್ಯಕರ್ತರಿಂದ ಸರ್ವೇ ಮಾಡಿಸಿ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸ್ವಾಮೀಜಿ ಅವರ ಕರೆಗೆ ಓಗೊಟ್ಟು ಎಬಿವಿಪಿ ಸಂಘಟನೆಯ ಯುವಕರು ನಿಡಸೋಶಿ ಗ್ರಾಮದ ಮನೆ ಮನೆಗೆ ತೆರಳಿ, ಬುದ್ದಿ ಮಾಂದ್ಯ ಮಕ್ಕಳ ಸರ್ವೇ ಕಾರ್ಯ ನಡೆಸಿದ್ದಾರೆ. ಆಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಒಟ್ಟಿನಲ್ಲಿ ಜಗತ್ತು ಎಷ್ಟೇ ಮುಂದುವರೆದರೂ ಗ್ರಾಮೀಣ ಪ್ರದೇಶದ ಜನ ಮಾತ್ರ ಇನ್ನೂ ಜಾಗೃತರಾಗುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಿರುವ ಸರಕಾರಗಳು ಇಲಾಖೆಗಳು ಇದ್ದೂ ಸತ್ತಂತಾಗಿರುವದು ದುರಾದೃಷ್ಟಕರ.
ವರದಿ: ಚಿಕ್ಕೋಡಿಯಿಂದ ಮುಸ್ತಾಕ್ ಪೀರಜಾದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.