ನ್ಯೂಯಾರ್ಕ್ (ಸೆ.26): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡಯುತ್ತಿರುವ 71ನೇ ಮಹಾಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಭಯೋತ್ಪಾದನೆಯ ನೀತಿ ಕುರಿತು ಭಾಷಣ ಮಾಡಿದರು.
‘‘ನಾವು ನಿಮಗೆ ಈದ್ ಶುಭಾಶಯ ಕೋರಿದೆವು. ನಿಮ್ಮ ಕ್ರಿಕೆಟ್ ತಂಡವನ್ನು ಅಭಿನಂದಿಸಿದೆವು. ಆದರೆ, ಅದಕ್ಕೆ ಪ್ರತಿಯಾಗಿ ನೀವು ಕೊಟ್ಟಿದ್ದು ಪಠಾಣ್ಕೋಟ್ ಮತ್ತು ಉರಿ ಸೇನಾನೆಲೆಯ ದಾಳಿಯನ್ನು. ಮೊದಲಿಗೆ ನೀವು ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಬಗ್ಗೆ ಕನಸು ಕಾಣುವುದನ್ನು ಬಿಟ್ಟುಬಿಡಿ.’’ ಹೀಗೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ಕಠೋರ ಶಬ್ದಗಳ ಮೂಲಕ ಎಚ್ಚರಿಸಿದ್ದಾರೆ.
ಜಗತ್ತಿನಲ್ಲಿ ಶಾಂತಿ ನೆಲೆಸುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟ ಸುಷ್ಮಾ, ಸ್ವಚ್ಛ ಭಾರತ್ ಮಿಷನ್ ಸೇರಿ ಅನೇಕ ವಿಷಯಗಳನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದರು.
ಅತ್ಯಂತ ದೊಡ್ಡ ಮಾನವ ಹಕ್ಕು ಉಲ್ಲಂಘನೆಯೆಂದರೆ ಅದು ಭಯೋತ್ಪಾದನೆ. ಹಾಗಾಗಿ ಅದರ ವಿರುದ್ಧ ಎಲ್ಲರೂ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಬೇಕಿದೆ. ನಮಗೆ ಬದ್ಧತೆಯಿದ್ದರೆ ಅದು ಅಸಾಧ್ಯವಲ್ಲ ಎಂದೂ ಸುಷ್ಮಾ ಹೇಳಿದ್ದಾರೆ.