ಕಾಶ್ಮೀರದಲ್ಲಿ ವೀರ ಯೋಧನ ಅಂತ್ಯಸಂಸ್ಕಾರದ ವೇಳೆಯೂ ಕಲ್ಲುತೂರಾಟ

By Suvarna Web DeskFirst Published May 10, 2017, 6:11 AM IST
Highlights

ರಜೆಯ ಮೇಲಿದ್ದ ಉಮರ್ ಫಯಾಜ್, ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ಊರಿಗೆ ಹೋಗಿರುತ್ತಾರೆ. ಮದುವೆ ಮನೆಯಲ್ಲಿದ್ದಾಗಲೇ ಐದಾರು ಉಗ್ರಗಾಮಿಗಳು ಮಂಗಳವಾರ ಸಂಜೆ ನುಗ್ಗಿ ಅವರನ್ನು ಅಪಹರಿಸುತ್ತಾರೆ. ಕೆಲ ಹೊತ್ತಿನ ಬಳಿಕ ಶೋಪಿಯನ್ ಜಿಲ್ಲೆಯ ಹರ್ಮೇನ್ ಎಂಬಲ್ಲಿ ಯುವ ಸೈನಿಕನ ಶವ ಸಿಕ್ಕುತ್ತದೆ. ಗುಂಡೇಟುಗಳಿಂದ ಮೈತುಂಬಾ ರಕ್ತಸಿಕ್ತವಾಗಿರುತ್ತದೆ.

ಶ್ರೀನಗರ(ಮೇ 10): ಕಾಶ್ಮೀರದಲ್ಲಿ ಸೈನಿಕರ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸುವುದನ್ನು ನೋಡಿದ್ದೇವೆ. ಆದರೆ, ಸೈನಿಕನ ಶವಯಾತ್ರೆಯಂತಹ ಶೋಕ ಸನ್ನಿವೇಶದಲ್ಲೂ ಆ ದುರುಳರು ತಮ್ಮ ದುಷ್ಕೃತ್ಯ ಬಿಟ್ಟಿಲ್ಲ. ನಿನ್ನೆ ರಾತ್ರಿ ಉಗ್ರಗಾಮಿಗಳಿಂದ ಹತ್ಯೆಗೀಡಾದ ಸೇನಾಧಿಕಾರಿ ಉಮರ್ ಫಯಾಜ್ ಅವರ ಶವಯಾತ್ರೆಯ ವೇಳೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ಹೊರಗಿನ ಜನರು ಇಂಥದ್ದೊಂದು ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ.

ಯಾರು ಈ ಉಮತ್ ಫಯಾಜ್?
ಕಾಶ್ಮೀರದ ಕುಲ್ಗಾಂ ಜಿಲ್ಲೆಯವರಾದ 22 ವರ್ಷದ ಉಮರ್ ಫಯಾಜ್ ಕಳೆದ ವರ್ಷದ ಡಿಸೆಂಬರ್'ನಲ್ಲಷ್ಟೇ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರಿಕೊಂಡು ಜಮ್ಮುವಿನ ಅಖ್ನೂರ್ ಸೆಕ್ಟರ್'ಗೆ ಪೋಸ್ಟ್ ಆಗಿದ್ದರು. ಹಾಕಿ ಹಾಗೂ ವಾಲಿಬಾಲ್ ಆಟಗಾರರಾದ ಅವರು ಈ ವರ್ಷ ಯುವ ಅಧಿಕಾರಿಗಳ ಶಿಕ್ಷಣ ಪಡೆಯುವ ಯೋಜನೆ ಇತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.

ರಜೆಯ ಮೇಲಿದ್ದ ಉಮರ್ ಫಯಾಜ್, ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ಊರಿಗೆ ಹೋಗಿರುತ್ತಾರೆ. ಮದುವೆ ಮನೆಯಲ್ಲಿದ್ದಾಗಲೇ ಐದಾರು ಉಗ್ರಗಾಮಿಗಳು ಮಂಗಳವಾರ ಸಂಜೆ ನುಗ್ಗಿ ಅವರನ್ನು ಅಪಹರಿಸುತ್ತಾರೆ. ಕೆಲ ಹೊತ್ತಿನ ಬಳಿಕ ಶೋಪಿಯನ್ ಜಿಲ್ಲೆಯ ಹರ್ಮೇನ್ ಎಂಬಲ್ಲಿ ಯುವ ಸೈನಿಕನ ಶವ ಸಿಕ್ಕುತ್ತದೆ. ಗುಂಡೇಟುಗಳಿಂದ ಮೈತುಂಬಾ ರಕ್ತಸಿಕ್ತವಾಗಿರುತ್ತದೆ.

ಯುವ ಸೇನಾಧಿಕಾರಿಯ ಹತ್ಯೆ ಘಟನೆ ಬಗ್ಗೆ ಭಾರತೀಯ ಸೇನೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಹತ್ಯೆಗೈದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಾಜಪುತಾನ ರೈಫಲ್ಸ್'ನ ಕರ್ನಲ್ ಲೆ| ಜ| ಅಭಯ್ ಕೃಷ್ಣ ಮೃತ ಸೈನಿಕನ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

"ಕಾಶ್ಮೀರ ಕಣಿವೆಯಲ್ಲಿ ಈ ಘಟನೆ ಪ್ರಮುಖ ಘಟ್ಟವಾಗಲಿದೆ. ಕಾಶ್ಮೀರಿ ಜನರು ಭಯೋತ್ಪಾದನೆ ವಿರುದ್ಧ ನಿರ್ಣಾಯಕವಾಗಿ ತಿರುಗಿಬೀಳಲಿದ್ದಾರೆ," ಎಂದು ಕರ್ನಲ್ ಅಭಯ್ ಕೃಷ್ಣ ಹೇಳಿದ್ದಾರೆ.

click me!