ಬೆಂಗಳೂರು(ಸೆ.26): ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಐವರು ಸಾಧಕರನ್ನು 2015ನೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಗೌರವ ಪ್ರಶಸ್ತಿಗೆ ಲೇಖಕರಾದ ಡಾ.ಕೃಷ್ಣಮೂರ್ತಿ ಹನೂರು, ಡಾ.ಎಚ್.ಎಸ್.ಶಿವಪ್ರಕಾಶ್, ಡಾ.ಎಲ್.ಹನುಮಂತಯ್ಯ, ನೇಮಿಚಂದ್ರ, ಡಾ.ಎಚ್.ನಾಗವೇಣಿ ಅವರು ಭಾಜನರಾಗಿದ್ದಾರೆ.
ಈ ಕುರಿತು ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಐದು ಮಂದಿ ಗಣ್ಯರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಗೌರವ ಪ್ರಶಸ್ತಿ ಸೇರಿದಂತೆ 2014ರ ಪುಸ್ತಕ ಬಹುಮಾನ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದರು.
2015ನೇ ವರ್ಷದ ಗೌರವ ಪ್ರಶಸ್ತಿಯು ತಲಾ ರೂ 50 ಸಾವಿರ ನಗದು, ಫಲಕವನ್ನು ಒಳಗೊಂಡಿದೆ. 2014ರ ಪುಸ್ತಕ ಬಹುಮಾನ ಪ್ರಶಸ್ತಿಗೆ 17 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯ ಮೊತ್ತ ತಲಾ ರೂ 25 ಸಾವಿರ ನಗದು, ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿನಿಧಿ ಬಹುಮಾನಕ್ಕೆ 6 ಮಂದಿ ಲೇಖಕರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕಾದಂಬರಿ ವಿಭಾಗಕ್ಕೆ ರೂ15 ಸಾವಿರ ನಗದು, ಇನ್ನುಳಿದಂತೆ ತಲಾ ರೂ 5 ಸಾವಿರ ಪ್ರಶಸ್ತಿ ಮೊತ್ತ ನಿಗದಿಪಡಿಸಲಾಗಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಸಮಾರಂಭದಲ್ಲಿ ಲೇಖಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
2014ರ ಪುಸ್ತಕ ಬಹುಮಾನ
ನನ್ನ ಶಬ್ದ ನಿನ್ನಲಿ ಬಂದು (ಕಾವ್ಯ) ಕೆ.ಪಿ. ಮೃತ್ಯುಂಜಯ, ಆಡುಕಳ (ಕಾದಂಬರಿ) ಶ್ರೀಧರ ಬಳಿಗಾರ, ದಿನಚರಿಯ ಕಡೇ ಪುಟದಿಂದ (ಸಣ್ಣಕತೆ) ಜಯಶ್ರೀ ಕಾಸರವಳ್ಳಿ, ದೇವನಾಂಪ್ರಿಯ ಅಶೋಕ (ನಾಟಕ) ಎಂ ಭೈರೇಗೌಡ, ಅರ್ಥಾರ್ಥ (ಲಿಲಿತ ಪ್ರಬಂಧ) - ಎಮ್.ಎಸ್.ಶ್ರೀರಾಮ…, ಅಪೂರ್ವ ಪೂರ್ವ (ಪ್ರವಾಸ ಸಾಹಿತ್ಯ) ವೆಂಕಟೇಶ ಮಾಚಕನೂರ, ಆನಂದ ಕುಮಾರಸ್ವಾಮಿ (ಜೀವನಚರಿತ್ರೆ) ಜಿ.ಬಿ.ಹರೀಶ, ಬಯಲ ಬನಿ (ಸಾಹಿತ್ಯ ವಿಮರ್ಶೆ) ರವಿಕುಮಾರ್ ನೀಹಾ, ಶ್ರೀ ಕನಕದಾಸರ ಕೀರ್ತನೆಗಳು (ಗ್ರಂಥ ಸಂಪಾದನೆ ) ಟಿ.ಎನ್. ನಾಗರತ್ನ, ಬೆಳಗುತಿರುವ ಭಾರತ (ಮಕ್ಕಳ ಸಾಹಿತ್ಯ) ಎ.ಕೆ. ರಾಮೇಶ್ವರ, ಕ್ವಾಂಟಂ ಜಗತ್ತು (ವಿಜ್ಞಾನ ಸಾಹಿತ್ಯ) ಅಗ್ನಿ ಶ್ರೀಧರ್, ನಂಬಿಕೆ-ಮೂಢÜನಂಬಿಕೆ- ವೈಜ್ಞಾನಿಕ ಮನೋವೃತ್ತಿ (ಮಾನವಿಕ) ಎಮ್. ಅಬ್ದುಲ… ರೆಹಮಾನ್ ಪಾಷ, ಹಸ್ತಪ್ರತಿ ಸಂಕಥನ (ಸಂಶೋಧನೆ) ವೀರೇಶ ಬಡಿಗೇರ, ಗಾಳಿ ಪಳಗಿಸಿದ ಬಾಲಕ (ಸೃಜನಶೀಲ ಅನುವಾದ -1: ಮೂಲ-ದಿ ಬಾಯ್ ಹೂ ಹಾರ್ನೆಸ್ಡ್ ದ ವಿಂಡ್) ಕರುಣಾ ಬಿ.ಎಸ್., ಕಾರ್ಪೊರೇಟ್ ಕಾಲದಲ್ಲೂ ಕಾಲ್ರ್ ಮಾರ್ಕ್ಸ್ ಪ್ರಸ್ತುತ (ಸೃಜನೇತರ ಅನುವಾದ-2: ಮೂಲ-ವೈ ಮಾರ್ಕ್ಸ್ ವಾಸ್ ರೈಟ್) ಆರ್.ಕೆ. ಹುಡಗಿ, ಕಾಫಿ ಕಪ್ಪಿನೊಳಗೆ ಕೋಲಂಬಸ್ (ಸಂಕೀರ್ಣ) ಕೃತಿಗೆ ಜಿ.ಎನ್. ಮೋಹನ್, ಆವರ್ತ (ಮೊದಲ ಕೃತಿ: ಕಾದಂಬರಿ) ಆಶಾ ರಘು.