
ಬೆಂಗಳೂರು: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿ ಜುಲೈ 1ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ರಾಜ್ಯದಲ್ಲೂ ‘ಕರ್ನಾಟಕ ಜಿಎಸ್ಟಿ ವಿಧೇಯಕ'ವನ್ನು ಮಂಡಿಸಲಾಗಿದೆ. ರಾಜ್ಯವು ಯಾವ್ಯಾವ ಸರಕು ಮತ್ತು ಸೇವೆಗಳಿಗೆ ತೆರಿಗೆ ವಿಧಿಸಬಹುದೋ ಆ ಸರಕು ಮತ್ತು ಸೇವೆಗಳಿಗೆ ಶೇ.20ನ್ನು ಮೀರದಂತೆ ಒಂದು ದರದಲ್ಲಿ ಜಿಎಸ್ಟಿ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಆ ದರ ಎಷ್ಟು ಎಂಬುದನ್ನು ಹೇಳಿಲ್ಲ. ಅದು ಶೇ.20ರ ಒಳಗೆ ಎಷ್ಟಾದರೂ ಆಗಬಹುದು.
ಮಾನವ ಉಪಭೋಗಕ್ಕಾಗಿ ಮಾಡಿದ ಮದ್ಯಪಾನೀಯಗಳ ಪೂರೈಕೆ ಹೊರತುಪಡಿಸಿದಂತೆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ರಾಜ್ಯದೊಳಗಿನ ಎಲ್ಲ ಪೂರೈಕೆಗಳ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ ಪರಿಷತ್ತು ಶಿಫಾರಸು ಮಾಡಿದಂತೆ ಅಧಿಸೂಚಿಸಬೇಕಾದ ಶೇ.20 ಮೀರದ ಒಂದು ದರದಲ್ಲಿ ತೆರಿಗೆ ವಿಧಿಸಲು ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ- 2017' ಅವಕಾಶ ಕಲ್ಪಿಸಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಹಣಕಾಸು ಖಾತೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ, 2017' ಮಂಡಿಸಿದರು.
ಈ ಪ್ರಸ್ತಾವಿತ ಶಾಸನವು ರಾಜ್ಯದೊಳಗೆ ಘಟಿಸುವ ಸರಕುಗಳು ಅಥವಾ ಸೇವೆಗಳ ಅಥವಾ ಅವುಗಳೆರಡರ ಪೂರೈಕೆಯ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಿದೆ. ವಿಧಾನಸಭಾ ಸದಸ್ಯರಿಗೆ ಜಿಎಸ್ಟಿ (ಸರಕು ಮತ್ತು ಸೇವೆಗಳ ತೆರಿಗೆ) ಕುರಿತು ಮಾಹಿತಿ ನೀಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಸಾಧ್ಯವಾದರೆ ಗುರುವಾರವೇ ನಡೆಸಲಾಗುವುದು ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.
ಇಂಧನ ಮಾರಾಟ ದರ ಹೆಚ್ಚಳ ಪ್ರಸ್ತಾವ
ವಿಧಾನಸಭೆ: ವೈಮಾನಿಕ ಇಂಧನವೂ ಸೇರಿದಂತೆ ಪೆಟ್ರೋಲ್ನಂತಹ ಯಂ ತ್ರೋಪಕರಣ ಇಂಧನ ಸರಕುಗಳ ಮೇಲಿನ ಮಾರಾಟ ತೆರಿಗೆ ದರವನ್ನು ಶೇ.30ರಿಂದ ಶೇ.35ಕ್ಕೆ ಹೆಚ್ಚಳ ಮಾಡುವುದು ಸೇರಿದಂತೆ ಕೆಲವು ಮಾರಾಟ ತೆರಿಗೆಗಳ ಸುಧಾರಣೆ, ಹೆಚ್ಚಳದ ಪ್ರಸ್ತಾವ ಒಳ ಗೊಂಡ ಮಾರಾಟ ತೆರಿಗೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.