
ಬೆಂಗಳೂರು(ಎ.04): ಇಡೀ ರಾಜ್ಯವೇ ಬರಗಾಲದಿಂದ ತತ್ತರಿಸಿ ಹೋಗಿದೆ. ತೀವ್ರ ಬರಗಾಲಕ್ಕೆ ಸಿಲುಕಿ ಸಾವಿಗೀಡಾದ ಜನ, ಜಾನುವಾರುಗಳು ಅದೆಷ್ಟೋ. ಆದರೆ, ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಇದ್ಯಾವುದೂ ಕಾಣುತ್ತಿಲ್ವಾ ಎಂಬ ಅನುಮಾನ ಮೂಡುತ್ತಿದೆ. ಅಂತಹುದ್ದೇನಾಯಿತು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ಸರ್ಕಾರದಿಂದ ವಾಹನ ಭಾಗ್ಯ!
ರಾಜ್ಯದಲ್ಲೀಗ ಎಲ್ಲಿ ನೋಡಿದರೂ ಬರಗಾಲದ್ದೇ ವ್ಯಥೆ. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಮೇವೂ ಇಲ್ಲ. ಜನರು ಹನಿ ನೀರಿಗೂ ಪರದಾಡುತ್ತಿದ್ದಾರೆ. ಆದರೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರುಗಳಿಗೆ ಮಾತ್ರ ವಾಹನ ಭಾಗ್ಯ ಕರುಣಿಸಿದೆ ನಮ್ಮ ರಾಜ್ಯ ಸರ್ಕಾರ. ಜಿಲ್ಲಾ ಪಂಚಾಯತ್ಗಳಲ್ಲಿ ಹಣದ ಕೊರತೆ ಇದ್ದರೂ, ಹೊಸ ವಾಹನಗಳನ್ನು ಜಿಲ್ಲಾ ಪಂಚಾಯತ್'ಗಳಲ್ಲಿ ಲಭ್ಯ ಇರುವ ಅನುದಾನದಲ್ಲೇ ಹೊಸದಾಗಿ ವಾಹನ ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿ ಉಪಾಧ್ಯಕ್ಷರಿಗೂ 9 ಲಕ್ಷ ರೂ. ಮೌಲ್ಯದ ವಾಹನ!
2010ರಲ್ಲಿ ಇದ್ದ ಆರೂವರೆ ಲಕ್ಷ ಮಿತಿಯಿಂದ 9 ಲಕ್ಷ ರೂಪಾಯಿಗೆ ವಾಹನ ಖರೀದಿ ಮಿತಿ ಏರಿಸಿದ್ದು, ಪಂಚಾಯ್ತಿ ಹೆಚ್ಚು ವ್ಯಯಿಸಬೇಕಿದೆ. ಇನ್ನು, ಪ್ರತಿ ಜಿಲ್ಲಾ ಪಂಚಾಯ್ತಿಗೂ ವಾಹನ ಖರೀದಿಸಬೇಕಿರುವುದರಿಂದ ಹಲವು ಕೋಟಿ ರೂಪಾಯಿಗಳು ಖರ್ಚಾಗಲಿದೆ. ಮೊದಲೇ ಭೀಕರ ಬರಗಾಲದಿಂದ ರಾಜ್ಯ ಕಂಗೆಟ್ಟಿದ್ದು, ಜನರು ಪಡಬಾರದ ಪಾಡು ಪಡುತ್ತಿದ್ದಾರೆ. ಇದರ ಮಧ್ಯ ಸರ್ಕಾರ ಜನಪ್ರತಿನಿಧಿಗಳ ಪಾಲನೆ-ಪೋಷಣೆಗೆ ಮುಂದಾಗಿರೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.