
ಭಾರತ ಚಿತ್ರರಂಗದ ಅತಿಲೋಕ ಸುಂದರಿ ಈಗಾ ನೆನಪು ಮಾತ್ರ. ತನ್ನ ಸೌಂದರ್ಯದಿಂದಲೇ ಸಿನಿರಸಿಕರ ಮನ ಗೆದ್ದಿದ್ದ ನಾಯಕಿ ಇಂದು ಪಂಚಭೂತಗಳಲ್ಲಿ ಲೀನಾವಾಗಿದ್ದಾಳೆ. ಈ ಮೂಲಕ ಬಾಲಿವುಡ್ನ ಮೊದಲ ಮಹಿಳಾ ಸೂಪರ್ ಸ್ಟಾರ್ ಕಳೆದುಕೊಂಡ ಚಿತ್ರರಂಗ ಕಂಬನಿ ಮಿಡಿದಿದೆ.
ಭಕ್ತ ಕುಂಬಾರ ಬಾಲೆ. ರೂಪ್ ಕಿ ರಾಣಿ. ಅತಿಲೋಕ ಸುಂದರಿ.ಶಾಶ್ವತವಾಗಿ ಮರೆಯಾದಳು. ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಪಂಚಭೂತಗಳಲ್ಲಿ ಲೀನರಾದರು.
ಕಳೆದ ಶನಿವಾರ ಹೃದಯಾಘಾತದಿಂದ ದುಬೈನಲ್ಲಿ ವಿಧಿವಶರಾಗಿದ್ದ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಮುಂಬೈನ ಬೋನಿ ಕಪೂರ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಚಂದಿರನಲ್ಲಿ ಲೀನನಾಗಿದ್ದ ಚಾಂದಿನಿಯ ಅಂತಿಮ ದರ್ಶನಕ್ಕೆ ಸೆಲೆಬ್ರೇಷನ್ ಸ್ಪೊರ್ಟ್ಸ್ ಕ್ಲಬ್ನಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರ ದಂಡೇ ಹರಿದುಬಂದಿತ್ತು.
7 ಕಿ.ಮೀ ಮೆರವಣಿಗೆ
ಬಳಿಕ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ನಿಂದ ಸುಮಾರು ಏಳು ಕಿಲೋ ಮೀಟರ್ ದೂರದ ವಿಲೆಪಾರ್ಲೆ ಸೇವಾ ಸಮಾಜ ರುದ್ರ ಭೂಮಿಯತ್ತ ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಈ ವೇಳೆ ಮಾರ್ಗದುದ್ದಕ್ಕೂ ಗಣ್ಯರು, ಆಪ್ತರು, ಅಭಿಮಾನಿಗಳು ಮೋಹಕ ತಾರೆಯನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡರು.
ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ದಾರಿಯುದ್ದಕ್ಕೂ ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಶ್ರೀದೇವಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪತಿ ಬೋನಿ ಕಪೂರ್, ಮಗ ಅರ್ಜುನ್ ಕಪೂರ್, ಹರ್ಷವರ್ಧನ್ ಕಪೂರ್ ಜೊತೆಗೆ ನಿಂತ ದೃಶ್ಯ ಎಲ್ಲರ ಮನಕಲಕುವಂತಿತ್ತು.
ಇನ್ನೂ ಶ್ರೀದೇವಿ ಇಷ್ಟಪಡುತ್ತಿದ್ದ ಕಾಂಚಿವರಂ ಸೀರೆ ಉಡಿಸಿ.. ಮಲ್ಲಿಗೆ ಮುಡಿಸಿ..ಹಣೆಗೆ ಕುಂಕುಮವಿಟ್ಟು.. ತುಟಿಗೆ ಲಿಫ್ಟ್ಸ್ಟಿಕ್ ಹಚ್ಚಿ. ಅಂತಿಮ ಯಾತ್ರೆ ನಡೆಸಲಾಯಿತು.
ಸಂಜೆ 6 ಗಂಟೆ ಸುಮಾರಿಗೆ ವಿಲ್ಲೆಪಾರ್ಲೆಯ ಹಿಂದೂ ಚಿತಾಗಾರದಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಪತಿ ಬೋನಿ ಕಪೂರ್ ಶ್ರೀದೇವಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಐದು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ತಾರೆಯಾಗಿ ಮಿನುಗಿದ್ದ ಶ್ರೀದೇವಿ ಪಂಚಭೂತಗಳಲ್ಲಿ ಲೀನರಾದರು. ಮೇರು ನಟಿಯನ್ನು ಕಳೆದುಕೊಂಡು ಬಾಲಿವುಡ್ ಅಕ್ಷರಶಃ ಬಡವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.