
ಬೆಂಗಳೂರು(ಫೆ.21): ಸುರೇಶ್ ನೀವು ಎಲ್ಲಿದ್ದರೂ ಬನ್ನಿ. ನಾನು ಹೆಚ್ಚು ದಿನ ಬದುಕುವುದಿಲ್ಲ. ಕೊನೆಯ ಬಾರಿ ಬಂದು ಮಾತನಾಡಿ..!’
ಇದು ನೆಲಮಂಗಲ ಸಮೀಪದ ಕೆಎಸ್ಆರ್ಟಿಸಿ ಬಸ್ನ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 30 ವರ್ಷದ ಮಮತಾ ಅವರ ಹಂಬಲ.
ಆರು ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ಸುರೇಶ್ ಮತ್ತು ಮಮತಾ ದೂರಾಗಿದ್ದರು. ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ಅವರು ಕೊನೆಯ ಬಾರಿಗೆ ತನ್ನ ಪತಿ ಸುರೇಶ್ ಜತೆ ಮಾತನಾಡಬೇಕೆಂದು ಹಾತೊರೆಯುತ್ತಿದ್ದಾರೆ. ಕೆಂಗೇರಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಸುರೇಶ್ ನಿತ್ಯ ಕುಡಿದು ಮನೆಗೆ ಬರುತ್ತಿದ್ದರು ಎನ್ನುವ ಕಾರಣಕ್ಕೆ ದಂಪತಿ ಮಧ್ಯೆ ಜಗಳವಾಗಿ, ದೂರಾಗಿದ್ದರು. ಮಮತಾಳ ಸಹೋದರ ಕೃಷ್ಣೇಗೌಡ, ‘ಭಾವ ಎಲ್ಲಿದ್ದರೂ ದಯಮಾಡಿ ಒಮ್ಮೆ ಬಂದು ನೋಡಿ, ಮಮತಾ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾಳೆ. ಕೊನೆಯ ಬಾರಿಗೆ ಆಕೆಯನ್ನು ಮಾತನಾಡಿಸಿ, ನಿಮಗಾಗಿ ಆಕೆ ಕನವರಿಸುತ್ತಿದ್ದಾಳೆ. ಒಮ್ಮೆ ಬಂದು ನೋಡಿಕೊಂಡು ಹೋಗಿ’ ಎಂದು ಮಾಧ್ಯಮಗಳ ಮೂಲಕ ಸುರೇಶ್ಗೆ ಮನವಿ ಮಾಡಿಕೊಂಡರು.
ಹಾಸನದ ವೀರಾಪುರದ ತವರು ಮನೆಗೆ ಹೋಗಿದ್ದ ಮಮತಾ ಸೋಮವಾರ ರಾತ್ರಿ ಮಗನೊಂದಿಗೆ ಬೆಂಗಳೂರಿಗೆ ವಾಪಸ್ ಬರುವಾಗ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.75 ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಅಂತ್ಯಕ್ರಿಯೆಗೆ ಹೋಗಿದ್ದ ಭಾಗ್ಯಮ್ಮ:
ಚಾಮರಾಜನಗರದಲ್ಲಿರುವ ಸಹೋದರಿ ಪತಿಯ ಅಂತ್ಯಕ್ರಿಯೆ ಮುಗಿಸಿಕೊಂಡು, ಸಹೋದರನ ಕಾರಿನಲ್ಲಿ ಬಂದ ಭಾಗ್ಯಮ್ಮ, ಬೆಳ್ಳೂರು ಕ್ರಾಸ್ನಲ್ಲಿ ಶೃಂಗೇರಿ-ಬೆಂಗಳೂರು ಬಸ್ ಹತ್ತಿದ್ದರು. ನೆಲಮಂಗಲ ಟೋಲ್ ಮುಗಿಯುತ್ತಿದ್ದಂತೆ ಮಗನಿಗೆ ಕರೆ ಮಾಡಿ 8ನೇ ಮೈಲಿ ಬಳಿ ಬರಲು ಹೇಳಿದ್ದರು. ಆದರೆ, ತಾಯಿ ಬರುತ್ತಾರೆ ಎಂದು ಕಾಯುತ್ತಿದ್ದ ಪುತ್ರನಿಗೆ ಬಸ್ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹೋಗುವಷ್ಟರಲ್ಲಿ ತಾಯಿ ಸುಟ್ಟು ಕರಕಲಾಗಿದ್ದರು.
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.