
ನವದೆಹಲಿ(ಜು.24): ತಮ್ಮ 5 ವರ್ಷದ ಆಡಳಿತ ಮುಗಿಸಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ವಿದಾಯ ಹೇಳಿದರು.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿ, ತನ್ನ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ರಾಜಕೀಯ ದೃಷ್ಠಿಕೋನಕ್ಕೆ ಸಂಸತ್ ಮಹತ್ವದ ಕೊಡುಗೆ ನೀಡಿದೆ. ಎರಡೂ ಸಭೆಗಳಲ್ಲಿ ನಡೆದ ಗಂಭೀರ ಚರ್ಚೆಗಳಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ ಎಂದರು. ಈ ವೇಳೆ ಜುಲೈ 22, 1969ರಂದು ತಾವು ಹಾಜರಾದ ಸಂಸತ್ತಿನ ಮೊದಲ ಅಧಿವೇಶನವನ್ನು ನೆನಪಿಸಿಕೊಂಡರು.
ಪ್ರತಿ ದಿನ ನಮ್ಮ ಸುತ್ತ ಹಿಂಸೆ ಹೆಚ್ಚುತ್ತಿದೆ. ಈ ಹಿಂಸೆಯ ಹೃದಯದಲ್ಲಿ ಕಾರ್ಗತ್ತಲು, ಭಯ ಹಾಗೂ ಅಪನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ನಡೆಯುವ ಚರ್ಚೆಗಳು ಶಾಬ್ದಿಕ ಮತ್ತು ದೈಹಿಕ ಹಿಂಸೆಗಳಿಂದ ಮುಕ್ತವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.
ವಿವಿಗಳು ಚರ್ಚೆಯ ಕೇಂದ್ರವಾಗಬೇಕು
ವಿವಿಗಳು ಗಲಾಟೆಯ ಕೇಂದ್ರಗಳಾಗದೆ ಚರ್ಚೆಯ ಕೇಂದ್ರಗಳಾಗಬೇಕು. ಅಡ್ಡಿಗಳಿಗೆ ತಡೆಯೊಡ್ಡುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಕಲಿಸಬೇಕು. ಉತ್ತಮ ಆಡಳಿತ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಬಡತನ ನಿರ್ಮೂಲನೆ ಮೂಲಕ ಸಂತೋಷದ ಜೀವನದ ಹಕ್ಕನ್ನು ಜನರು ಸಾಕಾರಗೊಳಿಸಿಕೊಳ್ಳಬಹುದು' ಎಂದು ಹೇಳಿದರು.
ಮಂಗಳವಾರ 81ರ ಹರೆಯದ ಪ್ರಣಬ್ ಅವರು ನಿಯೋಜಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ವಿದಾಯ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಹಮೀದ್ ಹನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.