
ಉಡುಪಿ(ಮೇ.17): ಉಡುಪಿಯ ಕೃಷ್ಣಮಠದ ಆವರಣ ಅಪರೂಪ ಸಮಾಗಮವೊಂದಕ್ಕೆ ಸಾಕ್ಷಿಯಾಗಲಿದೆ. ಎರಡು ಪ್ರಸಿದ್ದ ಸಂಸ್ಥಾನಗಳ ಯತಿಗಳು ಶತಶತಮಾನಗಳ ಬಳಿಕ ಮುನಿಸು ಮರೆತು ಮುಖಾಮುಖಿಯಾಗಲಿದ್ದಾರೆ. ಮಾದ್ವ ಪರಂಪರೆಯಲ್ಲಿ ಇದೊಂದು ಐತಿಹಾಸಿಕ ಸಮಾಗಮ ಎನ್ನಲಾಗುತ್ತಿದೆ. ಈ ಕುರಿತು ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಉಡುಪಿಯ ಅಷ್ಟಮಠಗಳ ಪೈಕಿ ಒಂದಾದ ಸೋದೆ ವಾದಿರಾಜ ಸಂಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಮಠ, ಇವೆರಡೂ ಮಾದ್ವ ಪರಂಪರೆಯ ಎರಡು ಪ್ರಸಿದ್ಧ ಪೀಠಗಳು. 18ನೇ ಶತಮಾನದಲ್ಲಿ ಸೋದೆ ಮಠ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಉಡುಪಿ ಮೂಲದ ಇಬ್ಬರು ಸಹೋದರರು ಪೀಠಾಧಿಪತಿಗಳಾಗಿದ್ದರು. ಈ ಅವಧಿಯಲ್ಲಿ ಸೋದೆ ಮಠಾಧೀಶರನ್ನು ಕಾಯದೆ ಸುಬ್ರಹ್ಮಣ್ಯ ಮಠಾಧೀಶರು ಒಮ್ಮೆ ಪೂಜೆ ಮಾಡಿದರೆಂಬ ಕಾರಣಕ್ಕೆ ಎರಡೂ ಮಠದ ನಡುವೆ ಸಂಬಂಧ ಕಡಿದು ಹೋಗಿತ್ತು. ಅಂದಿನಿಂದ ನಾಲ್ಕಾರು ತಲೆಮಾರು ಕಳೆದರೂ ಎರಡೂ ಮಠದ ಸ್ವಾಮೀಜಿಗಳು ಪರಸ್ಪರ ಮುಖದರ್ಶನವೇ ಮಾಡುತ್ತಿರಲಿಲ್ಲ.
ಉಡುಪಿಯ ಅನಂತೇಶ್ವರ ಸನ್ನಿಧಿಯಲ್ಲಿ ಶೀಘ್ರವೇ ಇಬ್ಬರೂ ಮಠಾಧೀಶರು ಮುಖಾಮುಖಿಯಾಗಲಿದ್ದಾರೆ. ಐದನೇ ಬಾರಿ ಪರ್ಯಾಯ ಮಹೋತ್ಸವ ನಡೆಸುತ್ತಿರುವ ಪೇಜಾವರ ಮಠದ ವಿಶ್ವೇಶ ತೀರ್ಥರು ಈ ಸಮಾಗಮಕ್ಕೆ ಸಾಕ್ಷಿಯಾಗಲಿದ್ದಾರೆ. ಉಡುಪಿಯಲ್ಲಿ, ಶಿರಸಿಯ ಸೋದೆಯಲ್ಲಿ ನಂತರ ಸುಬ್ರಹ್ಮಣ್ಯದ ಮಠದಲ್ಲಿ ಇಬ್ಬರೂ ಯತಿಗಳು ಪೂಜೆ ಪುನಸ್ಕಾರ ನಡೆಸಲಿದ್ದಾರೆ.
ಒಟ್ನಲ್ಲಿ ಮಾದ್ವ ಪರಂಪರೆಯ ಇತಿಹಾಸದ ಪುಟಗಳಲ್ಲಿ ಈ ಸಮಾಗಮ ದಾಖಲಾಗಲಿದೆ. ಹೊಸ ತಲೆಮಾರಿನ ಯುವ ಯತಿಗಳು ಸರಿಯಾದ ತೀರ್ಮಾನ ಕೈಗೊಂಡಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.