
ಬೆಂಗಳೂರು(ಸೆ. 08): ಗೌರಿ ಲಂಕೇಶ್ ಹತ್ಯೆ ಕುರಿತಾಗಿ ತಮ್ಮ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಜೀವರಾಜ್ ಅವರನ್ನು ಎಸ್ಐಟಿ ವಿಚಾರಣೆಗೊಳಪಡಿಸಲಿದೆ. ಜೀವರಾಜ್ ವಿಚಾರಣೆ ನಡೆಸುವಂತೆ ಎಸ್'ಐಟಿಗೆ ಸ್ವತಃ ಗೃಹಸಚಿವ ರಾಮಲಿಂಗಾರೆಡ್ಡಿಯವರೇ ಸೂಚಿಸಿದ್ದಾರೆ. ಜೀವರಾಜ್ ಸಾರ್ವಜನಿಕವಾಗೇ ಇಂಥ ಹೇಳಿಕೆ ಕೊಟ್ಟಿದ್ದು ತಪ್ಪು. ಅವರ ಹೇಳಿಕೆಯ ಹಿಂದಿನ ಮರ್ಮ ತಿಳಿಯುವುದು ಅಗತ್ಯವಿದೆ. ಹೀಗಾಗಿ ಅವರನ್ನು ಕರೆಸಿ ವಿಚಾರಣೆ ನಡೆಸುವಂತೆ ತನಿಖಾ ತಂಡಕ್ಕೆ ತಿಳಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಾದ ಮರುದಿನ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಸಮಾವೇಶವೊಂದರಲ್ಲಿ ಮಾತನಾಡುವಾಗ ಜೀವರಾಜ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ 'ಚೆಡ್ಡಿಗಳ ಮಾರಣಹೋಮ' ಎಂದು ಬರೆಯದೇ ಇದ್ದಿದ್ದರೆ ಇವತ್ತು ಅವರು ಸಾಯುತ್ತಿರಲಿಲ್ಲ," ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು.
ಜೀವರಾಜ್ ಅವರಷ್ಟೇ ಅಲ್ಲ, ಗೌರಿ ಲಂಕೇಶ್ ಕುರಿತಾಗಿ ಅನುಮಾನಾಸ್ಪದವಾಗಿ ಹೇಳಿಕೊಟ್ಟರೂ ಅವರನ್ನೆಲ್ಲಾ ವಿಚಾರಣೆಗೊಳಪಡಿಸಬೇಕೆಂದು ತಾನು ಎಸ್'ಐಟಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
'ಬಿಜೆಪಿಯವರು ಒಬ್ಬರೂ ಯಾಕಿರಲಿಲ್ಲ?'
ಗೌರಿ ಲಂಕೇಶ್ ಅಂತ್ಯ ಸಂಸ್ಕಾರದಲ್ಲಿ ಭಾರತೀಯ ಜನತಾ ಪಕ್ಷದ ಒಬ್ಬರೂ ಮುಖಂಡರು ಉಪಸ್ಥಿತರಿಲ್ಲದೇ ಹೋಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲೂ ತನಿಖೆ ಮಾಡುವಂತೆ ಎಸ್'ಐಟಿಗೆ ಗೃಹ ಸಚಿವರು ಸೂಚನೆ ನೀಡಿರುವುದು ತಿಳಿದುಬಂದಿದೆ.
ಒಟ್ಟಿನಲ್ಲಿ, ಗೌರಿ ಲಂಕೇಶ್ ಅವರು ತಾವು ಸತ್ತ ಬಳಿಕವೂ ಬಲಪಂಥೀಯ ಸಂಘಟನೆಗಳ ನಿದ್ದೆಗೆಡಿಸುತ್ತಿರುವಂತೆ ಕಾಣುತ್ತಿದೆ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.