
ಕಾರವಾರ[ಸೆ.25] ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ಮೂಲಕ ವಡ್ಡಿ, ದೇವನಹಳ್ಳಿ, ಶಿರಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
18 ತಿಂಗಳ ಕಾಲ ಕುಮಟಾ ಶಿರಸಿ ತಡಸ್ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ಕೋರಿದ್ದು, ಈ ರಸ್ತೆ ಬಂದ್ ಆದರೆ ಅಂಕೋಲಾ, ಕಾರವಾರ ಭಾಗದಿಂದ ಶಿರಸಿಗೆ ತೆರಳುವವರು 45ರಿಂದ 50 ಕಿ.ಮೀ. ಸುತ್ತುವರಿದು ಬರಬೇಕು. ಯಲ್ಲಾಪುರ ವಾರ್ಗವಾಗಿ ಶಿರಸಿಗೆ ತೆರಳುವುದಾದರೆ 150 ಕಿ.ಮೀ. ಆಗುತ್ತದೆ. ವಡ್ಡಿ ಮೇಲೆ ಶಿರಸಿಗೆ ತೆರಳಿದರೆ 110 ಕಿ.ಮೀ. ಆಗುತ್ತದೆ. ವಡ್ಡಿ ರಸ್ತೆ ದುರಸ್ತಿ ಆದರೆ ಸುತ್ತುಬಳಸಿ ಸಂಚರಿಸುವುದು ತಪ್ಪುತ್ತದೆ. ಹೀಗಾಗಿ ಆದ್ಯತೆಯ ಮೇಲೆ ಈ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ವಡ್ಡಿ ರಸ್ತೆ ಕುಮಟಾಕ್ಕೂ ಸಂಪರ್ಕ ಕಲ್ಪಿಸುತ್ತದೆ. ವಡ್ಡಿ ಮೂಲಕ ಮಾದನಗೇರಿಯಿಂದ ಕುಮಟಾಕ್ಕೆ ತಲುಪಲು ಸಾಧ್ಯ. ಭಾರಿ ಮಳೆಯಿಂದಾಗಿ ಈ ರಸ್ತೆ ಅಲ್ಲಲ್ಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಕುಮಟಾ ತಡಸ್ ರಾಜ್ಯ ಹೆದ್ದಾರಿ 2 ವರ್ಷ ಬಂದ್ ಆಗುವ ಸಾಧ್ಯತೆ ಇದ್ದು, ವಡ್ಡಿ ರಸ್ತೆ ಲಘು ವಾಹನಗಳಿಗೆ ಸಹಾಯವಾಗಲಿದೆ ಎಂದರು.
ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಚಂದ್ರು ಸಿದ್ದಿ, ನಾಗೇಶ ಕಮಾಣಿ, ರಾಮಚಂದ್ರ ಕಮಾಣಿ, ಕಮಲಾಕರ ಕಮಾಣಿ, ಲಕ್ಷ್ಮಣ ಸಿದ್ದಿ ಮನವಿ ಸಲ್ಲಿಕೆ ವೇಳೆ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.