
ಬೆಂಗಳೂರು(ಸೆ. 05): ಗೌರಿ ಲಂಕೇಶ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿರುವ ಘಟನೆಯನ್ನು ಹಲವು ಮಂದಿ ಖಂಡಿಸಿದ್ದಾರೆ. ಈ ಘಟನೆಗೆ ಸಂಘ ಪರಿವಾರ ಸಂಘಟನೆಗಳೇ ಕಾರಣ ಎಂದು ಮಾಜಿ ನಕ್ಸಲ್ ಸಿರಿಮನೆ ನಾಗರಾಜ್ ಆರೋಪಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಿರಿಮನೆ ನಾಗರಾಜ್, ಈ ಹತ್ಯೆಯು ಸಂಘ ಪರಿವಾರ ಸಂಘಟನೆಗಳು ಮಾಡಿದ್ದೆಂಬುದು ಚಿಕ್ಕ ಮಕ್ಕಳಿಗೂ ಅರ್ಥವಾಗುವಂಥದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಇವರನ್ನೆಲ್ಲಾ ಹತ್ಯೆಗೈದದ್ದು ಸಂಘ ಪರಿವಾರ ಸಂಘಟನೆಗಳೇ ಎಂದು ಹೇಳಿದ ಸಿರಿಮನೆ ನಾಗರಾಜ್, ಈ ಘಟನೆಗಳನ್ನು ಜರ್ಮನ್ ಮಾರಣಹೋಮಗಳಿಗೆ ಹೋಲಿಕೆ ಮಾಡಿದರು. "ಕಳೆದ ಶತಮಾನದಲ್ಲಿ ಜರ್ಮನಿ, ಇಟಲಿಯಲ್ಲಿ ನಡೆದ ಮಾರಣಹೋಮವನ್ನು ಮೀರಿಸುವಂಥ ಕೃತ್ಯಗಳು ಇವಾಗಿವೆ" ಎಂದು ಸುವರ್ಣನ್ಯೂಸ್'ಗೆ ಮಾಜಿ ನಕ್ಸಲ್ ತಿಳಿಸಿದ್ದಾರೆ.
ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಇದ್ದವರು ಚರ್ಚೆ ಮಾಡಲು ಸಿದ್ಧರಿರಬೇಕು. ಅದು ಬಿಟ್ಟು ಇಂಥ ಕೃತ್ಯ ಎಸಗುವುದು ಖಂಡನೀಯ ಎಂದೂ ಸಿರಿಮನೆ ನಾಗರಾಜ್ ಈ ಘಟನೆಯನ್ನು ಖಂಡಿಸಿದ್ದಾರೆ.
ಪಿ.ಲಂಕೇಶ್ ಅವರ ಪುತ್ರಿ ಹಾಗೂ ಎಡಪಂಥೀಯ ಪತ್ರಕರ್ತೆ ಎನಿಸಿದ್ದ ಗೌರಿ ಲಂಕೇಶ್ ಅವರನ್ನು ಇಂದು ಮಂಗಳವಾರ ರಾತ್ರಿ 8:30ರ ಸುಮಾರಿನಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಆರ್.ಆರ್.ನಗರದ ಸುಭಾಷ್ ಪಾರ್ಕ್ ಬಳಿ ಇರುವ ಅವರ ನಿವಾಸದಲ್ಲಿ ಮೂವರು ದುಷ್ಕರ್ಮಿಗಳು ಗೌರಿಯವರನ್ನು ಗುಂಡಿಟ್ಟು ಕೊಂದುಹಾಕಿದ್ದಾರೆ. ಮನೆಯಲ್ಲಿ ಗೌರಿ ಲಂಕೇಶ್ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ಒಂದೇ ನಿಮಿಷದಲ್ಲಿ 7 ಗುಂಡುಗಳನ್ನ ಹಾರಿಲಾಗಿದೆ. ಎದೆ, ಹೃದಯಭಾಗ ಹಾಗೂ ತೊಡೆಯ ಮೇಲೆ ಗುಂಡುಗಳು ಬಿದ್ದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.