ಬಗೆದಷ್ಟು ಬಯಲಾಗುತ್ತಿದೆ ನಟಿ ಸಿಂಧೂ ಸಹೋದರನ ಅಕ್ರಮ : ಮತ್ತೊಂದು ಭಾರಿ ಹಗರಣ ಬಯಲಿಗೆ

By Suvarna Web DeskFirst Published Mar 12, 2018, 8:35 AM IST
Highlights

ಕಾರು ಖರೀದಿಗೆ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್‌ಗೆ ವಂಚಿಸಿ ಬಂಧನಕ್ಕೊಳಗಾಗಿರುವ ದಕ್ಷಿಣ ಭಾರತ ಖ್ಯಾತ ನಟಿ ಸಿಂಧು ಮೆನನ್ ಅವರ ಸೋದರ ಮನೋಜ್ ಕಾರ್ತಿಕೇಯನ್ ಬಗ್ಗೆ ಬಗೆದಷ್ಟು ಪ್ರಕರಣಗಳು ಬಯಲಿಗೆ ಬರ ತೊಡಗಿವೆ.

ಎನ್.ಲಕ್ಷ್ಮಣ್ - ಬೆಂಗಳೂರು

ಬೆಂಗಳೂರು : ಕಾರು ಖರೀದಿಗೆ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್‌ಗೆ ವಂಚಿಸಿ ಬಂಧನಕ್ಕೊಳಗಾಗಿರುವ ದಕ್ಷಿಣ ಭಾರತ ಖ್ಯಾತ ನಟಿ ಸಿಂಧು ಮೆನನ್ ಅವರ ಸೋದರ ಮನೋಜ್ ಕಾರ್ತಿಕೇಯನ್ ಬಗ್ಗೆ ಬಗೆದಷ್ಟು ಪ್ರಕರಣಗಳು ಬಯಲಿಗೆ ಬರ ತೊಡಗಿವೆ.

ಎರಡು ತಿಂಗಳ ಹಿಂದೆ ಆರೋಪಿ ಬಿಎಂಡಬ್ಲ್ಯೂ ಕಾರು ಖರೀದಿ ನೆಪದಲ್ಲಿ ವಿಜಯ ಬ್ಯಾಂಕ್‌ಗೆ 35 ಲಕ್ಷ ವಂಚಿಸಿದ್ದಾನೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿದೆ. ಇನ್ನು ತನ್ನ ಕೃತ್ಯಕ್ಕೆ ಬಿಎಂಟಿಸಿ ಚಾಲಕರೊಬ್ಬರ ಗುರುತಿನ ಚೀಟಿ ಬಳಸಿದ ಆರೋಪದ ಮೇಲೆ ಸಿಂಧು ಮೆನನ್ ಅವರ ತಾಯಿ ದೇವಿಮೆನನ್ ಹಾಗೂ ಮನೋಜ್ ವಿರುದ್ಧ ಯಶವಂತಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾದ ಬಳಿಕ ದೇವಿಮೆನನ್ ಪರಾರಿ ಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಎರಡು ತಿಂಗಳ ಹಿಂದೆ ಸಂಜಯನಗರದಲ್ಲಿರುವ ವಿಜಯ ಬ್ಯಾಂಕ್‌ಗೆ ಬಿಎಂಡಬ್ಲ್ಯೂ ಕಾರು ಖರೀದಿ ನೆಪದಲ್ಲಿ ವಾಹನ ಸಾಲಕ್ಕೆ ಮನೋಜ್ ಅರ್ಜಿ ಸಲ್ಲಿಸಿದ್ದ. ಸಂಜಯನಗರದಲ್ಲಿ ಬಿಎಂಡಬ್ಲ್ಯೂನ ‘ನವನಿತ್ ಮೋಟಾರ್ಸ್‌’ ಕಂಪನಿ ಇದ್ದು, ಆರೋಪಿ ‘ನವನಿತ್ ಮೋಟಾರ್ಸ್‌ ವರ್ಕ್ಸ್ ಲಿ.’ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಲಗತ್ತಿಸಿದ್ದ. ಇದನ್ನು ಸರಿಯಾಗಿ ಪರಿಶೀಲಿಸದೆ ಬ್ಯಾಂಕ್‌ನವರು ಆರೋಪಿಗೆ ಸಾಲ ಮಂಜೂರು ಮಾಡಿದ್ದರು. ಇನ್ನು ಹಣ ನವನಿತ್ ಮೋಟಾರ್ಸ್‌ನವರಿಗೆ ನೇರವಾಗಿ ಸಂದಾಯವಾಗಬೇಕಿದ್ದರಿಂದ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ‘ನವನಿತ್ ಮೋಟ್ಸಾರ್ಸ್‌ ವರ್ಕ್ಸ್ ಲಿ.’ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ.

ಸರಿಯಾಗಿ ಪರಿಶೀಲಿಸಿದ ಬ್ಯಾಂಕಿನವರು ಈ ಖಾತೆಗೆ 35ಲಕ್ಷ ಹಣ ಜಮೆ ಮಾಡಿದ್ದರು. ಹಣ ಮಂಜೂರಾದ ಬಳಿಕ ಆರೋಪಿ ಎಷ್ಟು ಬಾರಿ ಕೇಳಿದರೂ ವಾಹನದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಅನುಮಾನಗೊಂಡು ಬ್ಯಾಂಕ್‌ನವರು ಪರಿಶೀಲನೆ ನಡೆಸಿದಾಗ ವಂಚನೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಹಣವನ್ನು ಆರೋಪಿ ಪ್ರಿಯತಮೆ ನಾಗಶ್ರೀ ಹಾಗೂ ದೊಡ್ಡಮ್ಮನ ಪುತ್ರಿ ಸುಧಾ ರಾಜಶೇಖರ್ ಅವರ ಖಾತೆಗೆ ವರ್ಗಾಯಿಸಿದ್ದ. ಈ ಪ್ರಕರಣದಲ್ಲಿ ಸಂಜಯನಗರ ಪೊಲೀಸರು ಮನೋಜ್, ನಾಗಶ್ರೀ ಮತ್ತು ಸುಧಾರಾಜಶೇಖರ್’ನನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!