
ಬೆಂಗಳೂರು (ಡಿ.25): ಹಾಗೆ ನೋಡಿದರೆ ದಿಲ್ಲಿ ಕಾಂಗ್ರೆಸ್ ನಾಯಕರಿಗೆ ಸಂಪುಟ ಪುನಾರಚನೆಯ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ.ದೇವೇಗೌಡರು ಕೂಡ ಬಂಡಾಯದ ಗುಮ್ಮ ತೋರಿಸಿ ವಿನಾಕಾರಣ ‘ಈಗ ಬೇಡ’ ಎಂದು ದಿಲ್ಲಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರು.
ಖರ್ಗೆ ಮತ್ತು ಡಿ ಕೆ ಶಿವಕುಮಾರ್ ಅವರಿಗೂ ಅಷ್ಟೊಂದು ಉತ್ಸಾಹ ಇರಲಿಲ್ಲ. ಆದರೆ ಸಂಪುಟ ವಿಸ್ತರಣೆ ಆಗಲೇಬೇಕು ಎಂಬ ಉತ್ಸಾಹ ಇದ್ದದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ. ತಮ್ಮ ಪ್ರಭಾವದಿಂದ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮತ್ತು ದಿನೇಶ್ ಗುಂಡೂರಾವ್ರನ್ನು ಎಸ್ ಅನ್ನಿಸಿದ ಸಿದ್ದು, ಪರಮೇಶ್ವರ್ ಅವರನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ.
ಮೊದಲ ಬಾರಿ ಇರಬೇಕೇನೋ ವೇಣುಗೋಪಾಲ್, ಸಿದ್ದು, ದಿನೇಶ್ ಮತ್ತು ಪರಮೇಶ್ವರ್ ಎರಡು ಗಂಟೆ ಕುಳಿತುಕೊಂಡು ತಯಾರು ಮಾಡಿದ ಪಟ್ಟಿಗೆ ರಾಹುಲ್ ಗಾಂಧಿ ಯಥಾವತ್ ಅಸ್ತು ಎಂದಿದ್ದು. ಖರ್ಗೆ, ಡಿಕೆಶಿ, ಮೊಯ್ಲಿ ಮತ್ತು ಹರಿಪ್ರಸಾದ್ರನ್ನು ಯಾರೂ ಅಭಿಪ್ರಾಯ ಕೂಡ ಕೇಳಲಿಲ್ಲ, ವಿವರಣೆಯನ್ನೂ ನೀಡಲಿಲ್ಲ. ಹೊಸದಾಗಿ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿ ಇದ್ದ ರಾಹುಲ್ ಗಾಂಧಿ, ಬಿ ಸಿ ಪಾಟೀಲ್ ಬದಲಿಗೆ ಎಂ ಬಿ ಪಾಟೀಲ್
ಹೆಸರು ಸೇರಿಸಿದ್ದು ಬಿಟ್ಟರೆ ಕರ್ನಾಟಕದ ವಿಸ್ತರಣೆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಕಾಂಚಾಣದ ಯೋಜನೆ
ಲೋಕಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರದ ಹಣಕಾಸು ಮತ್ತು ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ದೊಡ್ಡ ಕುಳಗಳನ್ನು ಜಾತಿ ಸಮೀಕರಣದ ಜೊತೆಗೆ ಬೆರೆಸಿ ಹೊಸ ಸಚಿವರ ಹೆಸರು ಅಂತಿಮಗೊಳಿಸಲಾಗಿದೆ. ರಮೇಶ್ ಜಾರಕಿಹೊಳಿಗಿಂತ ಸತೀಶ್ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರ ನೋಡಿಕೊಳ್ಳಬಲ್ಲರು ಎಂದು ಲೆಕ್ಕ ಹಾಕಿದ್ದರೆ, ಎಂ ಬಿ ಪಾಟೀಲ್ ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರ ನೋಡಿಕೊಳ್ಳಬಲ್ಲರು.
ಇನ್ನು ಸಾವಿರ ಕೋಟಿ ಬೆಲೆಬಾಳುವ ಎಂಟಿಬಿ ನಾಗರಾಜ್ಗೂ ಕೂಡ ಲೋಕಸಭಾ ಟಾರ್ಗೆಟ್ ನೀಡಿಯೇ ಸಚಿವರನ್ನಾಗಿ ಮಾಡಲಾಗಿದೆ. ರಹೀಮ್ ಖಾನ್ರನ್ನು ಖರ್ಗೆ ಸಾಹೇಬರಿಗೆ ಮುಸ್ಲಿಂ ಕವರ್ ನೀಡಲು ಆಯ್ಕೆ ಮಾಡಲಾಗಿದೆ. ಅವರು ಕೂಡ ಬೀದರ್ ಮಟ್ಟಿಗೆ ಗಟ್ಟಿ ಕುಳವೇ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.