
ಬೆಂಗಳೂರು (ಜ.11): ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳಿಗೆ ರಾಜ್ಯ ಸರ್ಕಾರ ಪ್ರಯಾಣ ದರ ನಿಗದಿ ಮಾಡಿದೆಯಾದರೂ ಈ ಹೊಸ ದರಗಳು ಓಲಾ ಮತ್ತು ಉಬರ್ನಂತಹ ಕಂಪನಿಗಳಿಗೆ ಖುಷಿ ತಂದಿದ್ದರೆ, ಆ್ಯಪ್ ಆಧರಿತ ಟ್ಯಾಕ್ಸಿ ಗ್ರಾಹಕರಿಗೆ ಮಾರಕವಾಗಿ ಪರಿಣಮಿಸಿದೆ.
ಹೊಸ ದರಗಳನ್ನು ಈ ಮೊದಲಿನ ಪ್ರಯಾಣದರಕ್ಕೆ ಹೋಲಿಸಿದರೆ ಕನಿಷ್ಠ ದರದಲ್ಲಿ ಕಡಿತವಾದಂತೆ ಕಾಣುತ್ತದೆ. ಆದರೆ, ಒಟ್ಟಾರೆ ಪ್ರಯಾಣ ದುಬಾರಿಯಾಗಲಿದೆ. ಈ ಮೊದಲು ಕೇವಲ ಎರಡೇ ವರ್ಗ ಅಂದರೆ ಎಸಿ ಮತ್ತು ನಾನ್ ಎಸಿ ವರ್ಗದಲ್ಲಿ ದರಗಳನ್ನು ಆಯಾ ಟ್ಯಾಕ್ಸಿ ಕಂಪನಿಗಳೇ ನಿಗದಿ ಮಾಡಿದ್ದವು. ಆದರೆ ಇದೀಗ ಸರ್ಕಾರ ಮಾಡಿರುವ ದರದಲ್ಲಿ ನಾಲ್ಕು ವರ್ಗಗಳನ್ನು ರೂಪಿಸಿದೆ. ಆರಂಭಿಕ 4 ಕಿ.ಮೀ. ವರೆಗಿನ ಕನಿಷ್ಠ ದರ ಸೋವಿ ಎನಿಸಿದರೂ ನಂತರದ ಪ್ರತಿ ಕಿ.ಮೀ.ಗೆ ವಿಧಿಸುವ ದರವನ್ನು ದುಬಾರಿ ಮಾಡಲಾಗಿದೆ.
ಅಲ್ಲದೆ, ಇದರಲ್ಲಿ ಕನಿಷ್ಠ ಹಾಗೂ ಗರಿಷ್ಠ ಎಂಬ ವಿಂಗಡನೆಯನ್ನು ನೀಡಿ, ಅದನ್ನು ನಿರ್ಧರಿಸುವ ಅಧಿಕಾರವನ್ನು ಟಾಕ್ಸಿ ಕಂಪನಿಗಳಿಗೆ ನೀಡಲಾಗಿದೆ. ಇದು ನೇರವಾಗಿ ಕಂಪನಿಗಳಿಗೆ ಲಾಭ ತಂದು ಕೊಡುವ ಹಾಗೂ ಗ್ರಾಹಕರಿಗೆ ಹೊರೆಯಾಗಲಿದೆ. ಇನ್ನು ಈ ಮೊದಲಿನ ಪೀಕ್ ಅವರ್ (ಸಂಚಾರ ಸಂದಣಿ ಅವಧಿ)ನಲ್ಲಿ ಶೇ.25ರಿಂದ ಶೇ.100ರಷ್ಟು ಹೆಚ್ಚುವರಿ ದರ ವಿಧಿಸುವ ಪದ್ಧತಿಯನ್ನು ಕೈಬಿಟ್ಟಿರುವುದು ಕೆಲಮಟ್ಟಿಗೆ ಗ್ರಾಹಕ ಪರ ನಿಲುವಾಗಿದ್ದು, ಇದೇ ವೇಳೆ ಕಾಯುವಿಕೆ ದರ (ವೇಟಿಂಗ್ ಚಾರ್ಜ್) ಮೊದಲ 20 ನಿಮಿಷಕ್ಕೆ ಉಚಿತ ಹಾಗೂ ನಂತರ ಪ್ರತಿ 15 ನಿಮಿಷಕ್ಕೆ 10 ರು.ಗಳಂತೆ ಮುಂದುವರಿಯಲಿದೆ.
ಚಾಲಕರ ಸಂಘಟನೆಗಳಿಂದ ವಿರೋಧ: ನೂತನ ದರ ಆ್ಯಪ್ ಆಧರಿತ ಟ್ಯಾಕ್ಸಿ ಸೇವಾ ಕಂಪನಿಗಳಾದ ಓಲಾ, ಉಬರ್ ಮೊದಲಾದ ಕಂಪನಿಗಳು ಹಾಗೂ ಮಾಲೀಕರ ಸ್ನೇಹಿಯಾಗಿದೆ ಎನ್ನಲಾಗುತ್ತಿದ್ದು, ಮತ್ತೊಂದೆಡೆ ಸರ್ಕಾರ ನಿಗದಿ ಮಾಡಿದ ಅವೈಜ್ಞಾನಿಕ ದರ ಚಾಲಕರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಉಪಯೋಗವಿಲ್ಲ ಎಂದು ಕೆಲ ಟ್ಯಾಕ್ಸಿ ಚಾಲಕರ ಸಂಘಟನೆಗಳು ಅತೃಪ್ತಿ ವ್ಯಕ್ತ ಪಡಿಸಿವೆ. ಮಾತ್ರವಲ್ಲ, ನೂತನ ದರ ನಿಗದಿ ವಿರುದ್ಧ ಮತ್ತೊಮ್ಮೆ ಹೋರಾಟಕ್ಕೆ ಇಳಿಯಲು ನಿರ್ಧರಿಸಿವೆ.
ಇನ್ನು ಗ್ರಾಹಕರು ಈ ಬದಲಾವಣೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಸರ್ಕಾರದ ಈ ನೂತನ ದರ ಪಟ್ಟಿ ಅವೈಜ್ಞಾನಿಕವಾಗಿದೆ. ಇದರಿಂದ ಚಾಲಕರು, ಗ್ರಾಹಕರಿಗೆ ಯಾವುದೇ ಪ್ರಯೋಜನ ವಿಲ್ಲ. ಇದೊಂದು ಏಕಪಕ್ಷೀಯ ನಿರ್ಧಾರವಾಗಿದ್ದು, ಹೋರಾಟ ಮಾಡಲಾಗುವುದು ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.