ಪೊಲೀಸರು ಇದೀಗ ಕಟ್ಟಡ ಮಾಲೀಕ ಸುನೀಲ್ ಸಿತಪ್ ಅವರನ್ನು ಬಂಧಿಸಿದ್ದು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಕೂಡ ತನಿಖೆ ನಡೆಸುತ್ತಿದ್ದು 15 ದಿನಗಳಲ್ಲಿ ವರದಿ ನೀಡಲಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮುಂಬೈ(ಜುಲೈ 26): ಮುಂಬೈ ಕಟ್ಟಡ ಕುಸಿತ ದುರಂತ ಪ್ರಕರಣದಲ್ಲಿ ಪೊಲೀಸರು ಶಿವಸೇನೆ ಮುಖಂಡ ಸುನೀಲ್ ಸಿತಪ್ ಅವರನ್ನು ನಿನ್ನೆ ಮಂಗಳವಾರ ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ಮುಂಬೈನ ಘಟ್ಕೋಪರ್ ಎಂಬಲ್ಲಿ ನಾಲ್ಕಂತಸ್ತಿನ ಕಟ್ಟಡ ಕುಸಿದು 12 ಮಂದಿ ಬಲಿಯಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಕಟ್ಟಡವು ಶಿವಸೇನೆ ಮುಖಂಡ ಸುನೀಲ್ ಸಿತಪ್ ಅವರಿಗೆ ಸೇರಿದ್ದಾಗಿದೆ. ನಾಲ್ಕಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಿತಪ್ ನರ್ಸಿಂಗ್ ಹೋಂ ಇದ್ದು, ಅದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ರಿಪೇರಿ ಕೆಲಸದಿಂದಾಗಿ ಕಟ್ಟಡಕ್ಕೆ ಅಪಾಯವಾಗಿತ್ತು ಎಂದು ಸ್ಥಳೀಯರು ಆರೋಪಿಸುತ್ತಾರೆ.
ಪೊಲೀಸರು ಇದೀಗ ಕಟ್ಟಡ ಮಾಲೀಕ ಸುನೀಲ್ ಸಿತಪ್ ಅವರನ್ನು ಬಂಧಿಸಿದ್ದು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಕೂಡ ತನಿಖೆ ನಡೆಸುತ್ತಿದ್ದು 15 ದಿನಗಳಲ್ಲಿ ವರದಿ ನೀಡಲಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮುಂಬೈನಲ್ಲಿ ಕುಸಿದು ಬೀಳುವಷ್ಟು ಅಪಾಯದಲ್ಲಿರುವ ಹಳೆಯ ಕಟ್ಟಡಗಳನ್ನು ಗುರುತಿಸುವ ಕಾರ್ಯವನ್ನು ಅಲ್ಲಿಯ ಸರಕಾರ ಇತ್ತೀಚೆಗೆ ಕೈಗೆತ್ತುಕೊಂಡಿದೆ. ಕೆಲ ತಿಂಗಳ ಹಿಂದಷ್ಟೇ ಶಿಥಿಲಾವಸ್ಥೆಯಲ್ಲಿರುವ 617 ಕಟ್ಟಡಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಅವುಗಳ ಪೈಕಿ 112 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎನ್ನಲಾಗಿದೆ. ಇನ್ನುಳಿದ ಕಟ್ಟಡಗಳನ್ನು ಶೀಘ್ರದಲ್ಲೇ ತೆರವುಗೊಳಿಸಲು ಬಿಎಂಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.