
ಜುಲೈ 26: ಇಂದು 18ನೇ ಕಾರ್ಗಿಲ್ ವಿಜಯೋತ್ಸವ ದಿನ. ಮೈ ಕೊರೆವ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ವೀರಾವೇಶದಿಂದ ಹೋರಾಡಿ, ಮಾತೃಭೂಮಿಗಾಗಿ ಮಣ್ಣಲ್ಲಿ ಮಣ್ಣಾದ ಸಾವಿರಾರು ಸೈನಿಕರು ನಮಗೆ ನೀಡಿ ಹೋದ ವಿಜಯದ ದಿನ. ದೇಶವಿದನ್ನು ಅಭಿಮಾನ ಮತ್ತು ನೋವಿನೊಂದಿಗೆ ಆಚರಿಸುತ್ತಿದೆ. ನಮಗಾಗಿ ಮಡಿದವರ ನೆನಪಿನಲ್ಲಿ ತುಂಬಿ ಬರುವ ಕಣ್ಣೀರಿನ ನಡುವೆ ಅವರ ತ್ಯಾಗ, ಧೈರ್ಯ, ಸಾಹಸ, ಬಲಿದಾನದ ಪ್ರತೀಕವೇ ಕಾರ್ಗಿಲ್ ವಿಜಯೋತ್ಸವ.
ಕಾರ್ಗಿಲ್ ಯುದ್ಧ ಎಂದ ಕೂಡಲೇ ನಮ್ಮ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆ ಸಂಚಾರವಾಗುತ್ತದೆ. 1999ರ ಮೇ 8 ರಿಂದ ಜುಲೈ 26 ರವರೆಗೆ ನಡೆದ 74 ದಿನಗಳ ಘೋರ ಯುದ್ಧ ವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ 20 ಸಾವಿರ ಭಾರತೀಯ ಯೋಧರು ಭಾಗವಹಿಸಿ, 527 ಯೋಧರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡರು. ಯುದ್ಧದ ವೇಳೆಯಲ್ಲಿ ನಮ್ಮ ಭಾರತೀಯ ಯೋಧರು ಸುಮಾರು 18 ಸಾವಿರ ಅಡಿಗಳಷ್ಟು ಎತ್ತರದ ಕಡಿದಾದ ಪರ್ವತ ಹತ್ತಿ ಯುದ್ಧ ಮಾಡಿ ವಿಜಯ ಸಾಧಿಸಿದರು.
ಒಟ್ಟಿನಲ್ಲಿ ಭಾರತಾಂಬೆಯ ರಕ್ಷಣೆಗೆ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಈ ದಿನ ಇಡೀ ದೇಶವವೇ ಸೆಲ್ಯೂಟ್ ಹೊಡೆಯುತ್ತೆ. ವೀರ ಯೋಧರಿಗೆ ನಮ್ಮದೊಂದು ಸಲಾಂ.
- ಜೆ.ಎಸ್. ಪೂಜಾರ್, ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.