
ನವದೆಹಲಿ(ಜ.13): ರಾಜ್ಯ ಸರ್ಕಾರದ ಬಹುನಿರೀಕ್ಷಿತ ಅಕ್ರಮ-ಸಕ್ರಮ ಯೋಜನೆಗೆ ಹಿನ್ನಡೆ ಆಗಿದೆ. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ಕೊಟ್ಟಿದೆ. ಅಲ್ದೆ, ಯಾವುದೇ ಅರ್ಜಿಗಳನ್ನ ಮುಂದುವರಿಸಬೇಡಿ. ಯಾವ ಕ್ರಮಕ್ಕೂ ಮುಂದಾಗಬೇಡಿ ಅಂತ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟಿದೆ.
ನಿಯಮ ಉಲ್ಲಂಘಿಸಿ ನಿರ್ವಿುಸಲಾದ ಕಟ್ಟಡಗಳ ಮಾಲೀಕರಿಗೆ ಮತ್ತೆ ನಿರಾಸೆಯಾಗಿದೆ. ಯಾಕಂದರೆ ಕಾನೂನುಬದ್ಧಗೊಳಿಸುವ ರಾಜ್ಯ ಸರ್ಕಾರದ ಮಹತ್ವದ ಅಕ್ರಮ-ಸಕ್ರಮ ಯೋಜನೆ ಮತ್ತೆ ನೆನಗುದಿಗೆ ಬೀಳೋ ಸಾಧ್ಯತೆಯಿದೆ. ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
‘ಸುಪ್ರೀಂ’ ಮೆಟ್ಟಿಲೇರಿದ್ದ ನಮ್ಮ ಬೆಂಗಳೂರು ಫೌಂಡೇಶನ್
ಡಿಸೆಂಬರ್ 15 ರಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ನಮ್ಮ ಬೆಂಗಳೂರು ಫೌಂಡೇಶನ್ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿಯ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಖೇಹರ್ ಸಿಂಗ್ ನೇತೃತ್ವದ ಪೀಠ, ಹೈಕೋರ್ಟ್ ಆದೇಶಕ್ಕೆ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಇಡೀ ಯೋಜನೆ ಕುರಿತು ಸುದೀರ್ಘ ವಿಚಾರಣೆ ನಡೆಸಬೇಕಾಗಿದೆ ಅಂತಲೂ ಅಭಿಪ್ರಾಯಪಟ್ಟಿದೆ. ಅಲ್ದೆ ತಡೆ ಇರುವವರೆಗೂ ಅಕ್ರಮ-ಸಕ್ರಮ ಯೋಜನೆಯ ಯಾವ್ದೇ ಅರ್ಜಿಗಳನ್ನ ಸಾರ್ವಜನಿಕರಿಂದ ಸ್ವೀಕರಿಸಬಾರದು ಅಂತಲೂ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ಶುಲ್ಕ ವಿಧಿಸಿ ಕಾನೂನು ಬದ್ಧಕ್ಕೆ ಪೆಟ್ಟು
ಈಗಾಗ್ಲೇ ನಗರ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನ ತೆರವುಗೊಳಿಸುವ ಬದಲು ಪ್ರದೇಶವಾರು ಶುಲ್ಕ ವಿಧಿಸಿ ಕಾನೂನು ಬದ್ಧಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಂತ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲ ಬಸವ ಪ್ರಭುಪಾಟೀಲ್ ಮನವರಿಕೆ ಮಾಡಲು ಯತ್ನಿಸಿದರು. ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ಈ ಯೋಜನೆಯೇ ಅವೈಜ್ಞಾನಿಕ. ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನ ನಿರ್ಮಿಸಿಕೊಳ್ಳುವುದೇ ಕಾನೂನು ಬಾಹಿರ. ಕೇವಲ ದಂಡ ಪಾವತಿಸಿ ತಕ್ಷಣ ಸಕ್ರಮಗೊಳಿಸುವುದು ಸರಿಯಲ್ಲ. ಮೂರನೇ ಮಹಡಿಯನ್ನ ನಾಲ್ಕನೇ ಮಹಡಿಗೇರಿಸುವ ಯೋಜನೆಯಾಗಿದ್ದರೆ ಬೇರೆ. ಈ ಯೋಜನೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿ ಅಕ್ರಮ ಕಟ್ಟಡ ಕಾಲೋನಿಗಳನ್ನೂ ಕಾನೂನು ಬದ್ಧಗೊಳಿಸುವ ಯೋಜನೆ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಯಬೇಕು ಅಂತ ಸಿಂಘ್ವಿ ಬಲವಾಗಿ ವಾದಿಸಿದರು. ವಾದ- ಪ್ರತಿವಾದ ಆಲಿಸಿದ ತ್ರಿಸದಸ್ಯರ ಪೀಠ, ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
ಬೆಂಗಳೂರಲ್ಲಿ ಒಂದು ಲಕ್ಷದ 54 ಸಾವಿರ ಪ್ರಕರಣ!
೨೦೧೩ ರಲ್ಲಿ ಕರ್ನಾಟಕ ನಗರ ಮತ್ತು ಹಳ್ಳಿ ಯೋಜನೆ ಕಾನೂನಿನ ಕೆಲ ನಿಯಮಗಳಿಗೆ ತಿದ್ದುಪಡಿ ತಂದು ಅಕ್ರಮ ಕಾಲೋನಿಗಳನ್ನ ಸಕ್ರಮಗೊಳಿಸುವ ಯೋಜನೆಯನ್ನ ಸರ್ಕಾರ ರೂಪಿಸಿತ್ತು. ಆದರೆ ಹೈ ಕೋರ್ಟ್ ನಲ್ಲಿ ಪ್ರಕರಣವನ್ನು ಗೆದ್ದುಕೊಂಡಿದ್ದ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮಾತ್ರ ಮಧ್ಯಂತರವಾಗಿ ಹಿನ್ನೆಡೆ ಅನುಭವಿಸಿದೆ . ಬಿಬಿಎಂಪಿ ಪ್ರಕಾರ ಬೆಂಗಳೂರು ನಗರ ಒಂದರಲ್ಲಿಯೇ ಒಂದು ಲಕ್ಷದ ೫೪ ಸಾವಿರ ಅಕ್ರಮ ಸಕ್ರಮ ಪ್ರಕರಣಗಳಿವೆ .
ವರದಿ: ಪ್ರಶಾಂತ್ ನಾತು, ಸುವರ್ಣ ನ್ಯೂಸ್, ನವದೆಹಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.