ಭಾಗವತ್‌ ಹೇಳಿಕೆ ತಪ್ಪಾಗಿ ಅರ್ಥೈಕೆ: ಆರೆಸ್ಸೆಸ್‌

By Suvarna Web DeskFirst Published Feb 13, 2018, 9:40 AM IST
Highlights

‘ಸೇನೆಗಿಂತ ಆರೆಸ್ಸೆಸ್‌ ಕಾರ‍್ಯಕರ್ತರ ಕ್ಷಮತೆ ಹೆಚ್ಚು’ ಎಂಬರ್ಥದ ಹೇಳಿಕೆ ನೀಡಿದ್ದರು ಎನ್ನಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್‌ ಅವರ ನೆರವಿಗೆ ಈಗ ಆರೆಸ್ಸೆಸ್‌ ಧಾವಿಸಿದೆ.

ನವದೆಹಲಿ : ‘ಸೇನೆಗಿಂತ ಆರೆಸ್ಸೆಸ್‌ ಕಾರ‍್ಯಕರ್ತರ ಕ್ಷಮತೆ ಹೆಚ್ಚು’ ಎಂಬರ್ಥದ ಹೇಳಿಕೆ ನೀಡಿದ್ದರು ಎನ್ನಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್‌ ಅವರ ನೆರವಿಗೆ ಈಗ ಆರೆಸ್ಸೆಸ್‌ ಧಾವಿಸಿದೆ. ‘ಭಾಗವತ್‌ ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ’ ಎಂದು ಸಂಘ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾಧ್ಯಮಗಳಿಕೆ ಹೇಳಿಕೆಯೊಂದನ್ನು ಆರೆಸ್ಸೆಸ್‌ ವಕ್ತಾರ ಮನಮೋಹನ ವೈದ್ಯ ಸೋಮವಾರ ಬಿಡುಗಡೆ ಮಾಡಿದ್ದಾರೆ.

‘ಬಿಹಾರದ ಮಜಫ್ಫರ್‌ಪುರದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವತ್‌ ಭಾಗವಹಿಸಿದ್ದರು. ಸಂವಿಧಾನ ಅನುಮತಿ ನೀಡಿದರೆ ಅಥವಾ ಪರಿಸ್ಥಿತಿ ಉದ್ಭವಿಸಿದರೆ ಭಾರತೀಯ ಸೇನೆಯು ಜನಸಾಮಾನ್ಯರನ್ನು ಸೈನಿಕರನ್ನಾಗಿ ಮಾಡಲು 6 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಸಂಘದ ಕಾರ‍್ಯಕರ್ತರಿಗೆ ಸೇನೆಯು ಕೇವಲ 3 ದಿವಸದ ತರಬೇತಿ ನೀಡಿದರೆ ಅವರು ಸೈನಿಕರಾಗಿಬಿಡುತ್ತಾರೆ. ಅಂಥ ಶಿಸ್ತನ್ನು ಆರೆಸ್ಸೆಸ್‌ ಸ್ವಯಂಸೇವಕರಲ್ಲಿ ರೂಢಿಸಲಾಗಿದೆ ಎಂದು ಹೇಳಿದ್ದರು’ ಎಂದು ವೈದ್ಯ ತಿಳಿಸಿದ್ದಾರೆ.

‘ಸೇನೆಗಿಂತ ವೇಗವಾಗಿ ಆರೆಸ್ಸೆಸ್‌ ಯುದ್ಧಕ್ಕೆ ತಯಾರಾಗಬಲ್ಲದು. ಯಾವುದೇ ಕಾರ್ಯಾಚರಣೆಗೆ ಭಾರತೀಯ ಸೇನೆ 6-7 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಸಂಘ ಮೂರು ದಿನಗಳಲ್ಲಿ ಇಂಥ ಯೋಜನೆ ರೂಪಿಸುವ ಸಾಮರ್ಥ್ಯ ಹೊಂದಿದೆ. ಸಂವಿಧಾನ ಅವಕಾಶ ನೀಡಿದರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಹ ಸ್ವಯಂ ಸೇವಕರು ಸಜ್ಜಾಗಿದ್ದಾರೆ,’ ಎಂದು ಭಾಗವತ್‌ ಹೇಳಿದ್ದರು ಎಂದು ಭಾನುವಾರ ವರದಿಯಾಗಿತ್ತು.

click me!