
ತಿರುವನಂತಪುರಂ(ಅ. 10): ಕೇರಳದಲ್ಲಿ ರಾಜಕೀಯ ಹಿಂಸಾಚಾರಗಳು ಮುಂದುವರಿಯುತ್ತಿವೆ. ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಆಟೋರಿಕ್ಷಾ ಚಾಲಕನಾಗಿದ್ದ ಆರೆಸ್ಸೆಸ್ ಕಾರ್ಯಕರ್ತನನ್ನು ವಾಹನದಿಂದ ಕೆಳಗಿಳಿಸಿ ರಾಡ್'ಗಳಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಕಣ್ಣೂರಿನ ತಲಚ್ಚೇರಿಯಲ್ಲಿ ಈ ಘಟನೆ ನಡೆದಿದೆ. ಆತನ ತಲೆ ಮತ್ತು ಕಾಲಿಗೆ ಗಾಯಗಳಾಗಿವೆ. ಪೊಲೀಸರು ಸದ್ಯಕ್ಕೆ ಇದೊಂದು ರಾಜಕೀಯ ಹಲ್ಲೆ ಇರಬಹುದೆಂದು ಶಂಕಿಸಿ ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದ ಆರೆಸ್ಸೆಸ್ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ತಂಡವೊಂದು ಆಸ್ಪತ್ರೆಗೆ ಹೋಗಿ ಕಾರ್ಯಕರ್ತನ ಹೇಳಿಕೆ ಪಡೆಯಲು ಯತ್ನಿಸುತ್ತಿದೆ.
ಮೊನ್ನೆ ಭಾನುವಾರದಂದು ಕಣ್ಣೂರಿನ ಪನೂರ್ ಎಂಬಲ್ಲಿ ಮಾರ್ಕ್ಸ್'ವಾದಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದ ಮೆರವಣಿಗೆ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಐವರು ಕಮ್ಯೂನಿಸ್ಟ್ ಕಾರ್ಯಕರ್ತರು ಸೇರಿದಂತೆ 9 ಮಂದಿಗೆ ಗಾಯಗಳಾಗಿದ್ದವು. ಅದಕ್ಕೆ ಪ್ರತೀಕಾರವಾಗಿ ತಲಚ್ಚೇರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಮೇಲೆ ಹಲ್ಲೆಯಾಗಿರಬಹುದೆಂದು ಶಂಕಿಸಲಾಗಿದೆ.
ಕಳೆದ ವಾರವಷ್ಟೇ ಭಾರತೀಯ ಜನತಾ ಪಕ್ಷವು ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳ ವಿರುದ್ಧ ರಣಕಹಳೆ ಮೊಳಗಿಸಿ 15 ದಿನಗಳ ಕಾಲ್ನಡಿಗೆ ಯಾತ್ರೆಗೆ ಚಾಲನೆ ನೀಡಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೇರಳದ ರಾಜಕೀಯ ಕೊಲೆಗಳಿಗೆ ಸಿಎಂ ಪಿನಾರಯಿ ವಿಜಯನ್ ಅವರೇ ಹೊಣೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.