500, 1,000 ನೋಟು ರದ್ದು: ಈ ಬಗ್ಗೆ ಆರ್'ಬಿಐ ಗವರ್ನರ್ ಸ್ಪಷ್ಟನೆ

By Suvarna Web DeskFirst Published Nov 8, 2016, 5:11 PM IST
Highlights

ಕಲಿ ಭಾರತೀಯ ಕರೆನ್ಸಿ ವ್ಯವಹಾರ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಆರ್‌ಬಿಐ ತೀವ್ರ ಕಳವಳ ಹೊಂದಿದೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ. ನೋಟುಗಳ ಮುದ್ರಣ ಹೆಚ್ಚಿಸಲು ಮತ್ತು ಹೊಸ ಕರೆನ್ಸಿ ನೋಟುಗಳನ್ನು ಸಾಧ್ಯವಾದಷ್ಟು ಬೇಗ ಪೂರೈಸಲು ಯತ್ನಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.

ನವದೆಹಲಿ(ನ.08): ಪ್ರಧಾನಿ ಮೋದಿಯವರ ಭಾಷಣದ ಬಳಿಕ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಹಣಕಾಸು ಸಚಿವಾಲಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚಿನ ವಿವರಣೆ ನೀಡಿದ್ದಾರೆ. ನಕಲಿ ಭಾರತೀಯ ಕರೆನ್ಸಿ ವ್ಯವಹಾರ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಆರ್‌ಬಿಐ ತೀವ್ರ ಕಳವಳ ಹೊಂದಿದೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ. ನೋಟುಗಳ ಮುದ್ರಣ ಹೆಚ್ಚಿಸಲು ಮತ್ತು ಹೊಸ ಕರೆನ್ಸಿ ನೋಟುಗಳನ್ನು ಸಾಧ್ಯವಾದಷ್ಟು ಬೇಗ ಪೂರೈಸಲು ಯತ್ನಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.

ಬಳಿಕ ಮಾತನಾಡಿದ ಶಕ್ತಿಕಾಂತ್ ದಾಸ್, ಹೊಸದಾಗಿ ಬಿಡುಗಡೆಯಾಗುತ್ತಿರುವ  500  ಮತ್ತು 2,000 ನೋಟುಗಳ ಪ್ರತಿಗಳನ್ನು ಪ್ರದರ್ಶಿಸಿದರು. ಹೊಸ ಲಕ್ಷಣ, ಹೊಸ ವಿನ್ಯಾಸ, ಹೊಸ ಅಳತೆಯನ್ನು ಹೊಂದಿರುವ ಈ ನೋಟುಗಳು ನ. 10ರಿಂದ ಚಲಾವಣೆಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಇತರ ಮುಖ ಬೆಲೆಯ ನೋಟುಗಳನ್ನು ಈ ನಡುವೆ ಮುದ್ರಣಗೊಳ್ಳುತ್ತವೆ ಎಂದು ದಾಸ್ ತಿಳಿಸಿದ್ದಾರೆ.

ರೂ. 2,000 ನೋಟಿನಲ್ಲಿ ಒಂದು ಕಡೆಯಲ್ಲಿ ಮಂಗಳಯಾನ್ ಎಂದು ಬರೆಯಲಾಗಿದೆ. ಹಿಂದಿಯಲ್ಲೂ  2,000 ಎಂದು ಮುದ್ರಿಸಲಾಗಿದೆ.  ದೇಶದ ಮಧ್ಯಮ ಮತ್ತು ದೀರ್ಘಕಾಲೀನ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ. ಹಣಕಾಸು ಮತ್ತು ಆರ್ಥಿಕ ಸಮಗ್ರತೆಗೆ ಸಹಾಯ ಮಾಡುತ್ತದೆ. ಮಧ್ಯರಾತ್ರಿಯಿಂದ ಬಳಿಕ ಯಾರಾದರೂ  500 ಮತ್ತು  1,000 ನೋಟುಗಳನ್ನು ಸ್ವೀಕರಿಸಿದರೆ, ಅದಕ್ಕೆ ಆತನೇ ವೈಯಕ್ತಿಕ ಹೊಣೆಗಾರನಾಗಿರುತ್ತಾನೆ ಎಂದು ದಾಸ್ ವಿವರಿಸಿದ್ದಾರೆ. ನ. 24ರ ಬಳಿಕ ನಾವು ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸುತ್ತೇವೆ. ಈ ನಿರ್ಧಾರ ಕೈಗೊಳ್ಳುವ ಮೊದಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು ಎಂದು ದಾಸ್ ತಿಳಿಸಿದ್ದಾರೆ.     

ಟ್ವಿಟರಲ್ಲಿ ಟ್ರೆಂಡಿಂಗ್

ನೋಟು ರದ್ದತಿಯ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ಎಟಿಎಂಗಳ ಮುಂದೆ ಜನರು ನೂಕುನುಗ್ಗಲು ನಡೆಸಿದ್ದಾರೆ. ಇನ್ನೊಂದೆಡೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್ ನಡೆದಿದ್ದು, ಕೇಂದ್ರದ ಈ ನಿರ್ಧಾರ ‘ಕಪ್ಪುಹಣದ ಮೇಲಿನ ಸರ್ಜಿಕಲ್ ದಾಳಿ’ ಎಂಬಂಥ ಒಕ್ಕಣೆಗಳು ಕಂಡು ಬಂದವು.  500 ಮತ್ತು  1,000 ನೋಟುಗಳನ್ನು ಕಡ್ಲೆ ಕಾಯಿ ಕಟ್ಟಿಕೊಡುವುದಕ್ಕೆ ಬಳಸುವಂಥ ಪೋಟೊಗಳನ್ನು ಕೆಲವು ತಮ್ಮ ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿದ್ದಾರೆ.  

 

click me!