
ಬೆಂಗಳೂರು(ಏ.17): ‘ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆ ಪ್ರಕರಣದಲ್ಲಿ ಸಿಲುಕಿರುವ ರೌಡಿಶೀಟರ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿ. ನಾಗರಾಜ ಅಲಿಯಾಸ್ ನಾಗ (56) ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದು, ತನ್ನ ಮಕ್ಕಳೊಂದಿಗೆ ಚೆನ್ನೈನ ಹಡಗುದಾಣದಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಇದೆ.
ಆರೋಪಿ ನಾಗ ತಮಿಳುನಾಡಿನ ಧರ್ಮಪುರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಮೇರೆಗೆ ಕಳೆದ ಎರಡು ದಿನಗಳ ಹಿಂದೆ ಎಸಿಪಿ ಮಟ್ಟದ ತಂಡವೊಂದು ಧರ್ಮಪುರಿಗೆ ತೆರಳಿತ್ತು. ತನ್ನ ಹುಡುಕಾಟದಲ್ಲಿರುವ ಪೊಲೀಸರು ಧರ್ಮಪುರಿಗೆ ಬರಲಿದ್ದಾರೆ ಎಂಬ ಮಾಹಿತಿ ಅರಿತ ನಾಗರಾಜ ಹಾಗೂ ಆತನ ಇಬ್ಬರು ಮಕ್ಕಳು ಅಲ್ಲಿಂದ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿ ಸಿಗದೆ ತನಿಖಾ ತಂಡ ಬರಿ ಕೈಯಲ್ಲಿ ನಗರಕ್ಕೆ ವಾಪಸ್ ಆಗಿದೆ.
ಮತ್ತೊಂದು ತಂಡ ತಮಿಳುನಾಡಿನಲ್ಲೇ ಆರೋಪಿ ಹುಡುಕಾಟದಲ್ಲಿ ತೊಡಗಿದೆ. ಧರ್ಮಪುರಿಯಲ್ಲಿರುವ ನಾಗನ ಸಂಬಂಧಿಕರ ಮನೆ ಶೋಧಿಸಿದೆವು. ಆತ ಅಲ್ಲಿಂದ ಚೆನ್ನೈನಲ್ಲಿರುವ ಬಂದರು ಪ್ರದೇಶಕ್ಕೆ ತೆರಳಿದ್ದು, ಹಡಗುವೊಂದರಲ್ಲಿ ಅಡಗಿ ಕುಳಿತಿರುವ ಮಾಹಿತಿ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಸುವರ್ಣ ಸೋದರ ಪತ್ರಿಕೆ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಪತ್ನಿಯನ್ನು ಸಂಪರ್ಕಿಸದ ನಾಗ
ನಾಗರಾಜ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ತಮಿಳುನಾಡಿನಲ್ಲಿ ಸಾಕಷ್ಟುಪರಿಚಿತರನ್ನು ಹೊಂದಿದ್ದಾನೆ. ಅಲ್ಲದೆ, ನಾಗ ಮತ್ತು ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿ ಕೂಡ ಯಾವುದೆ ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಶ್ರೀರಾಂಪುರದ ಮನೆಯಲ್ಲಿರುವ ನಾಗನ ಪತ್ನಿ ಲಕ್ಷ್ಮೇ ಮೇಲೆ ಕೂಡ ನಿಗಾ ವಹಿಸಲಾಗಿದೆ. ಇಲ್ಲಿ ತನಕ ಆರೋಪಿ ಪತ್ನಿಯನ್ನು ಸಂಪರ್ಕಿಸಿಲ್ಲ. ವೃತ್ತಿಪರ ಅಪರಾಧಿಯಾಗಿರುವ ಆತ ಪೊಲೀಸರ ಹುಡುಕಾಟದ ಮಾಹಿತಿಗಳನ್ನು ಅರಿತು ಎಚ್ಚರಿಕೆಯಿಂದ ಇದ್ದಾನೆ. ಭಾನುವಾರ ಬೆಳಗ್ಗೆ ಆರೋಪಿ ತಮಿಳುನಾಡಿನ ಚೆನ್ನೈನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಂದ ಕೂಡ ಪರಾರಿಯಾಗಿದ್ದಾನೆ.
ಆರೋಪಿ ಬಂಧನಕ್ಕೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು. ಮಾರ್ಚ್ 18ರಂದು ಉದ್ಯಮಿ ಉಮೇಶ್ ಹಾಗೂ ಅವರ ಸ್ನೇಹಿತರನ್ನು ಅಪಹರಿಸಿದ್ದ ನಾಗರಾಜ ಉದ್ಯಮಿ ಬಳಿಯಿದ್ದ ರದ್ದಾದ ಹಳೆಯ 500, 1000 ಮುಖ ಬೆಲೆಯ 50 ಲಕ್ಷ ಹಣ ದರೋಡೆ ಮಾಡಿದ್ದ. ಉದ್ಯಮಿ ನೀಡಿದ ದೂರಿನ ಮೇರೆಗೆ ಶ್ರೀರಾಂಪುರದಲ್ಲಿರುವ ಆರೋಪಿ ನಾಗನ ಮನೆ ಮೇಲೆ ದಾಳಿ ನಡೆಸಿದಾಗ ರದ್ದಾಗ ಹಳೆಯ 14.80 ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಹಲವು ಭೂ ದಾಖಲೆಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.