
ಬೆಂಗಳೂರು(ಅ. 13): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತುಚ್ಛ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಇದೀಗ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ತಾನು ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಮಾಧ್ಯಮಗಳು ಈ ವಿಚಾರವನ್ನು ವಿವಾದಗೊಳಿಸುತ್ತಿರುವುದೇ ತಪ್ಪು ಎಂದು ಮೀಡಿಯಾಗಳ ಮೇಲೆಯೇ ಬೇಗ್ ಹರಿಹಾಯ್ದಿದ್ದಾರೆ. ಗೃಹ ಸಚಿವ ರಾಮಲಿಂಗ ರೆಡ್ಡಿ ಕೂಡ ತಮ್ಮ ಸಹೋದ್ಯೋಗಿಯ ಬೆಂಬಲಕ್ಕೆ ನಿಂತಿದ್ದಾರೆ.
ಭಾಷಣದಲ್ಲಿ ರೋಷನ್ ಬೇಗ್ ಹೇಳಿದ್ದೇನು?
"ಎಲ್ಲರೂ ನಮ್ಮ ಮೋದಿ, ನಮ್ಮ ಮೋದಿ ಅಂತ ಹೊಗಳುತ್ತಿದ್ರು, ಈಗ ಏನಾಯ್ತು? ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಸಾವಿರ ರೂ.ಬ್ಯಾನ್ ಮಾಡಿ, 500 ರೂ. ನೋಟ್ ಬ್ಯಾನ್ ಮಾಡಿದ ಮೇಲೆ ಹೊಗಳುತ್ತಿದ್ದವರೇ ಬೈಯ್ತಿದ್ದಾರೆ. ‘ಈಗ ಥೂ.... ಮಗ...ಏನೆಲ್ಲ ಮಾಡಿಬಿಟ್ಟ ’ ಅಂತ ಬೈಯುತ್ತಿದ್ದಾರೆ. ನಾವಲ್ಲ, ಕಾಂಗ್ರೆಸ್ ಅಲ್ಲ, ಗುಜರಾತ್ನವರು, ಮಾರ್ವಾಡಿಗಳು, ಬಿಜೆಪಿ ಬೆಂಬಲಿಸಿದವರೆಲ್ಲ ಬೈಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ಭಾರತದೇಶವನ್ನು ಅಭಿವೃದ್ಧಿ ಪಡಿಸಿತ್ತು. ಇಂದಿರಾಗಾಂಧಿ ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟರು, ರಾಜೀವ್ ಗಾಂಧಿ ಸಹ ತಮ್ಮ ಜೀವನ ತ್ಯಾಗ ಮಾಡಿದ್ರು. ಆದರೀಗ, ಅವರ ಮಗ ರಾಹುಲ್ ಗಾಂಧಿಯನ್ನು ಮಾತ್ರ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಸಿದ್ರಾಮಯ್ಯ ರಾಜ್ಯದ ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ, ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದ್ರು. ನಿನ್ನೆ ಸಹ ಹೊಸ ಯೋಜನೆ ಆರಂಭಿಸಿದ್ರು. ಗರ್ಭಿಣಿಯರಿಗೆ ಬಿಸಿಯೂಟ ನೀಡುವ ಯೋಜನೆ. ಇಂತಹ ಜನಪರ ಯೋಜನೆ ಮಾಡೋದು ಬಿಟ್ಟು, ಸುಮ್ಮನೆ ಮೈಕ್ ಹಿಡ್ಕೊಂದು ಓಳು ಬಿಡೋದು ಮನ್ ಕಿ ಬಾತ್, ಮನ್ ಕಿ ಬಾತ್ ಅಂತ ಓಳ್ ಬಿಡೋದೆಲ್ಲ ಬೇಡ. ಆಮೇಲೆ, 5 ರೂಪಾಯಿಗೆ ಬ್ರೇಕ್ ಫಾಸ್ಟ್ , 10 ರೂಪಾಯಿಗೆ ಊಟ ಕೊಡ್ತೀದ್ದೀವಿ. ನೀವ್ಯಾಕೆ ಇದನ್ನೆಲ್ಲ ಕೊಡಲಿಲ್ಲ? ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ರು.."
ಬಿಜೆಪಿ ಟೀಕೆ:
ಪ್ರಧಾನಿ ಮೋದಿ ಈಗ ವಿಶ್ವಮಟ್ಟದ ನಾಯಕರಾಗಿ ದೇಶದ ಕೀರ್ತಿ ಬೆಳಗುತ್ತಿದ್ದಾರೆ. ಅಂಥ ನಾಯಕನ ಬಗ್ಗೆ ರೋಷನ್ ಬೇಗ್ ತುಚ್ಛವಾಗಿ ಮಾತನಾಡಿರುವುದು ಖಂಡನಾರ್ಹ. ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.