ಪುತ್ರ ಅಭಿಷೇಕ್ ಜೊತೆ ಸಬ್ ರಿಜಿಸ್ಟ್ರಾರ್ ಕಛೇರಿಗೆ ಅಂಬಿ ಭೇಟಿ
ಮದ್ದೂರಿನಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅಪ್ಪ-ಮಗ
ತಮ್ಮ ಹೆಸರಿನಲ್ಲಿರುವ ಆಸ್ತಿ ಪುತ್ರ ಅಭಿಷೇಕ್ ಗೆ ವರ್ಗಾವಣೆ
ಮಂಡ್ಯ(ಜು.26): ರೆಬಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ಇಂದು ಪುತ್ರ ಅಭಿಷೇಕ್ ಜೊತೆಗೆ ಮದ್ದೂರಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ್ದರು. ತಮ್ಮ ಹೆಸರಿನಲ್ಲಿರುವ ಆಸ್ತಿಯನ್ನು ಮಗ ಅಭಿಷೇಕ್ ಹೆಸರಿಗೆ ವರ್ಗಾಯಿಸಲು ಅಂಬಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದಾಗಿ ತಿಳಿದು ಬಂದಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಚೇರಿಯಲ್ಲಿದ್ದ ಅಂಬಿ,ಹುಟ್ಟೂರು ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಆಸ್ತಿಯನ್ನು ಪುತ್ರ ಅಭಿಷೇಕ್ ಹೆಸರಿಗೆ ಬರೆದಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಚೇರಿಯ ಒಳಗಡೆ ಯಾರಿಗೂ ಫೋಟೋ ಮತ್ತು ವಿಡಿಯೋ ಮಾಡಲು ಅಂಬಿ ಅವಕಾಶ ನೀಡಲಿಲ್ಲ. ಆದರೆ ಕಚೇರಿಯಿಂದ ಬಂದ ಕೂಡಲೇ ಅಭಿಮಾನಿಗಳಿಗೆ ಫೋಟೋ ಕ್ಲಿಕ್ಕಿಸಲು ಅವಕಾಶ ಮಾಡಿಕೊಟ್ಟರು.
ಈ ವೇಳೆ ನಾ ಮುಂದು, ನೀ ಮುಂದು ಎನ್ನುವಂತೆ ಅಭಿಮಾನಿಗಳು ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರ ಫೋಟೋ ಕ್ಲಿಕ್ಕಿಸಿದರು. ಆದರೆ ತವು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದು ಯಾಕೆ ಎಂಬುದಕ್ಕೆ ಮಾತ್ರ ಅಂಬಿ ಸ್ಪಷ್ಟ ಉತ್ತರ ನೀಡಲಿಲ್ಲ.