
ಸಿಂದಗಿ/ ಆಲಮೇಲ(ಜು.10): ‘ನೋಡಿ... ನಾನು ಯಾವುದೇ ತಪ್ಪು ಮಾಡಿಲ್ಲ. ಇನ್ನು ಮುಂದೆ ಪತ್ರ ನೀಡುವಾಗ ಎಚ್ಚರ ವಹಿಸುತ್ತೇನೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿನಾಕಾರಣ ನನ್ನ ಮೇಲೆ ಗೂಬೆ ಕುರಿಸುವ ಕೆಲಸ ನಡೆಯುತ್ತಿದೆ. ನಾನು ಟೋಲ್ ಸ್ಥಳಾಂತರ ಕಾರ್ಯಕ್ಕೆ ಶಿಫಾರಸು ಪತ್ರ ನೀಡಿದ್ದೇನೆ ಹೊರತು, ಯಾವುದೇ ಭಷ್ಟಾಚಾರದಲ್ಲಿ ಭಾಗಿಯಾಗಿಲ್ಲ’ ಎಂದು ಸಮರ್ಥಿಸಿಕೊಂಡರು.
ಪತ್ರ ನೀಡಿದ್ದೇ ತಪ್ಪಾಗಿದ್ದರೆ ಏನು ಮಾಡಬೇಕು? ಇನ್ನು ಪತ್ರ ನೀಡುವಲ್ಲಿ ನಾನು ಎಚ್ಚರ ವಹಿಸುತ್ತೇನೆ. ಆದರೆ, ನಾನು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂದು ಮಾಧ್ಯಮ ನನ್ನನ್ನು ಬಿಂಬಿಸಿವೆ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಹೆದರಿದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ತಮಗಾಗಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಚಹಾಕೂಟದಲ್ಲಿ ಭಾಗವಹಿಸದೇ ತೆರಳಿದ ಘಟನೆ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆಯಿತು.
ಸೊಲ್ಲಾಪುರ- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ೧೩ರ ಪೈಕಿ ವಿಜಯಪುರ ಜಿಲ್ಲೆಯ ಅಗಸನಾಳ ಟೋಲ್ ಪ್ಲಾಜಾವನ್ನು ತಿಡಗುಂದಿಗೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪತ್ರ ಬರೆದು ಒತ್ತಡ ತಂದಿರುವುದು ಸುವರ್ಣ ನ್ಯೂಸ್-ಕನ್ನಡಪ್ರಭದ ‘ಕವರ್ ಸ್ಟೋರಿ’ ತಂಡ ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಟೋಲ್ ಪ್ಲಾಜಾ ನಿರ್ಮಾಣಕ್ಕಾಗಿ ಕೆಲವೇ ಲಕ್ಷಗಳಲ್ಲಿ ಆಗಬಹುದಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ₹೩೦ ಕೋಟಿ ಗಳಿಗೂ ಅಧಿಕ ಪರಿಹಾರ ಪಡೆದಿರುವುದು ಮತ್ತು ಅದಕ್ಕೆ ಸಚಿವ ಜಿಗಜಿಣಗಿ ಪೂರಕವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಕನ್ನಡಪ್ರಭ ಜು.8ರಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.