ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಿದ್ದು, ಕಾಂಗ್ರೆಸ್ ಸೇರಿದ್ದಾರೆ. ಈ ಸಂಬಂಧ ಅವರ ತಂದೆ ಕಾಂಗ್ರೆಸ್ ಮುಖಂಡ ಅಸಮಾಧಾನ ಹೊರಹಾಕಿದ್ದು, ತಮ್ಮ ಮಗ ಹೇಡಿ ಎಂದು ಹೇಳಿದ್ದಾರೆ.
ಬಳ್ಳಾರಿ: ರಾಮನಗರ ಬಿಜೆಪಿ ಅಭ್ಯರ್ಥಿ ಚುನಾವಣಾ ಕಣದಿಂದ ದೂರ ಸರಿದ ಹಿನ್ನೆಲೆಯಲ್ಲಿ ಚಂದ್ರಶೇಖರ್ ತಂದೆ ಶಾಸಕ ಸಿಎಂ ಲಿಂಗಪ್ಪ ಮಗನ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಅವನಿಗೆ ಬಿಜೆಪಿಗೆ ಹೋಗಬೇಡ ಎಂದು ಹೇಳಿದ್ದೆ. ಚುನಾವಣೆ ಎದುರಿಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಬಹುದಿತ್ತು. ನನ್ನ ಮಗ ಮಾಡಿರುವುದು ಹೇಡಿ ಕೆಲಸ ಎಂದು ಹೇಳಿದ್ದಾರೆ.
ಇಂದು 20 ವರ್ಷದ ಮಕ್ಕಳೆ ನಮ್ಮ ಮಾತು ಕೇಳುವುದಿಲ್ಲ. ಅದರಲ್ಲಿ ಇವನು ನನ್ನ ಮಾತು ಕೇಳುತ್ತಾನಾ..? ಎಂದು ಲಿಂಗಪ್ಪ ಪ್ರಶ್ನೆ ಮಾಡಿದ್ದಾರೆ.
ಇನ್ನು ತಾವು 50 ವರ್ಷದಿಂದಲೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಕಳೆದು 11 ದಿನದಿಂದ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿರುವುದಾಗಿ ಹೇಳಿದರು.
ಆತ ಬಿಜೆಪಿಗೆ ಹೋಗುವಾಗ ತಾವು ಹಾಗೂ ಪತ್ನಿ ಇಬ್ಬರೂ ಕುಳಿತು ಬಿಜೆಪಿ ಸೇರಬೇಡ ಎಂದು ಹೇಳಿದ್ದೆವು. ನಮ್ಮ ಮಾತನ್ನು ಒಪ್ಪಿಕೊಂಡ ಬಳಿಕವೂ ಕೂಡ ಬಿಜೆಪಿ ಸೇರಿದ. ಅದೇ ಆತನ ಜೊತೆ ನನ್ನ ಕೊನೆಯ ಮಾತು. ಇನ್ನು ದಿಢೀರ್ ದಿಢೀರ್ ಆಗಿ ಇಂತಹ ಕೆಲಸ ಮಾಡಿದ್ದು, ಫಲಿತಾಂಶ ಬರುವವರೆಗೂ ಕಾದು ನೋಡಬಹುದಿತ್ತು ಎಂದು ಸಿಎಂ ಲಿಂಗಪ್ಪ ಹೇಳಿದ್ದಾರೆ.