ರಾಜೀನಾಮೆಗೆ ಸಜ್ಜಾಗಿದ್ದ ರಾಹುಲ್ ಕಾಂಗ್ರೆಸ್‌ನಲ್ಲಿ ಮತ್ತೆ ಸಕ್ರಿಯ?

By Kannadaprabha NewsFirst Published Jun 26, 2019, 8:14 AM IST
Highlights

ರಾಹುಲ್ ಮತ್ತೆ ಸಕ್ರಿ ಯ ಚುನಾವಣೆ ನಡೆವ ರಾಜ್ಯಗಳ ನಾಯಕರ ಜೊತೆ ಸಭೆ ಪಕ್ಷ ಸಂಘಟನೆಗೆ ರಾಹುಲ್‌ಗಾಂಧಿ ವಾಪಸ್ ಸುಳಿವು

ನವದೆಹಲಿ[ಜೂ.26]: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿ, ಪಕ್ಷ ಸಂಘಟನೆಯಿಂದ ದೂರ ಉಳಿದಿರುವ ರಾಹುಲ್ ಗಾಂಧಿ ಅವರು ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳ ಕಾಂಗ್ರೆಸ್ ನಾಯಕರ ಸಭೆಯನ್ನು ಈ ವಾರ ಕರೆದಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ರಾಹುಲ್ ಅವರು ಪಕ್ಷ ಸಂಘಟನೆ ವ್ಯವಹಾರಕ್ಕೆ ಮರಳುತ್ತಿರುವ ಲಕ್ಷಣ ಇದಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಜತೆಗೆ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬಹುದೆಂಬ ಕಾಂಗ್ರೆಸ್ಸಿಗರ ಆಸೆಗೆ ಜೀವ ಬಂದಂತಾಗಿದೆ

ಜೂ.27ರಂದು ಮಹಾರಾಷ್ಟ್ರ, ಮರುದಿನ ಹರ‌್ಯಾಣ ಹಾಗೂ ದೆಹಲಿ ಘಟಕಗಳ ನಾಯಕರ ಸಭೆಯನ್ನು ರಾಹುಲ್ ಗಾಂಧಿ ಅವರು ಕರೆದಿದ್ದಾರೆ. ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದಲ್ಲದೆ, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ವರದಿ ನೀಡುವಂತೆ ಎಲ್ಲ ರಾಜ್ಯ ಘಟಕಗಳ ಉಸ್ತುವಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಸದ್ಯದಲ್ಲೇ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕೂಡ ನಡೆಯಲಿದೆ. ರಾಹುಲ್ ಅವರು ಹುದ್ದೆಯಲ್ಲಿ ಮುಂದುವರಿಯತ್ತಾರಾ ಇಲ್ಲವಾ ಎಂಬ ಕುರಿತು ಆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಚುನಾವಣೆ ಬಳಿಕ ನಡೆದ ಪ್ರಥಮ ಸಿಡಬ್ಲ್ಯುಸಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಾಹುಲ್ ಹೇಳಿದ್ದರು. ಅವರನ್ನು ಮನವೊಲಿಸಲು ಕಾಂಗ್ರೆಸ್ಸಿಗರು ಏನೆಲ್ಲಾ ಪ್ರಯತ್ನ ಪಟ್ಟರೂ ಏನೂ ಆಗಿರಲಿಲ್ಲ. ಈ ನಡುವೆ, ಅವರು ಯಾವ ನಾಯಕರನ್ನೂ ಭೇಟಿ ಮಾಡುತ್ತಿರಲಿಲ್ಲ. ಪಕ್ಷದ ಸಂಘಟನೆ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ.

click me!