ಬೈಕ್ ಸವಾರರು ಉದ್ದ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಹರಿದಾಡುತ್ತಿರುವ ವಿಡಿಯೋದೊಂದಿಗೆ, ‘ಪ್ರವಾಹದ ಬಳಿಕ ಕೇರಳದ ತ್ರಿಶೂರಿನಲ್ಲಿ ಮಾತ್ರ ಒಂದು ಮದ್ಯದಂಗಡಿ ತೆರೆದಿದೆ. ಮದ್ಯ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ, ಅವರ ಶಿಸ್ತು ನೋಡಿ’ ಎಂದು ಒಕ್ಕಣೆ ಬರೆಯಲಾಗಿದೆ.
ತಿರುವನಂತಪುರಂ (ಆ. 27): ಬೈಕ್ ಸವಾರರು ಉದ್ದ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಹರಿದಾಡುತ್ತಿರುವ ವಿಡಿಯೋದೊಂದಿಗೆ, ‘ಪ್ರವಾಹದ ಬಳಿಕ ಕೇರಳದ ತ್ರಿಶೂರಿನಲ್ಲಿ ಮಾತ್ರ ಒಂದು ಮದ್ಯದಂಗಡಿ ತೆರೆದಿದೆ. ಮದ್ಯ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ, ಅವರ ಶಿಸ್ತು ನೋಡಿ’ ಎಂದು ಒಕ್ಕಣೆ ಬರೆಯಲಾಗಿದೆ.
ವಿಡಿಯೋದಲ್ಲಿ ಸುಮಾರು ಅರ್ಧ ಕಿಲೋಮೀಟರ್ವರೆಗೆ ಬೈಕ್ ಸವಾರರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯವಿದೆ. ಈ ವಿಡಿಯೋ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವೀಟರ್ನಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಕೇರಳದಲ್ಲಿ ಪ್ರವಾಹ ತಗ್ಗಿದ ಬಳಿಕ ಮದ್ಯಕೊಂಡುಕೊಳ್ಳಲು ಬೈಕ್ ಸವಾರರು ಕಿಲೋಮೀಟರ್ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.
‘ಬೂಮ್ಲೈವ್’ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಕೇರಳ ರಾಜ್ಯದ ವಿಡಿಯೋವೇ ಆದರೂ ತ್ರಿಶೂರಿನದ್ದಲ್ಲ, ಪಕ್ಕದ ಮಲ್ಲಪುರಂ ಜಿಲ್ಲೆಯ ವಿಡಿಯೋ. ಹಾಗೆಯೇ ಮದ್ಯಕೊಂಡುಕೊಳ್ಳಲು ಬೈಕ್ ಸವಾರರು ಸರತಿ ಸಾಲಿನಲ್ಲಿ ನಿಂತಿಲ್ಲ. ಬದಲಾಗಿ ಪೆಟ್ರೋಲ್ ಕೊಂಡುಕೊಳ್ಳಲು ನಿಂತಿದ್ದರು ಎಂಬುದು ತಿಳಿದು ಬಂದಿದೆ. ಅಲ್ಲದೆ ಈ ಬಗ್ಗೆ ಜಾದೇರ್ ಅಖ್ತರ್ ಎಂಬ ಸ್ಥಳೀಯರು ಬೂಮ್ಗೆ ಪ್ರತಿಕ್ರಿಯೆ ನೀಡಿದ್ದು, ‘ವಾಸ್ತವವಾಗಿ ಈ ಘಟನೆ ನಡೆದಿದ್ದು ಆಗಸ್ಟ್ 19-20 ರಂದು. ತೀವ್ರ ಪ್ರವಾಹದಿಂದಾಗಿ ಪೆಟ್ರೋಲ್ ಡೀಸೇಲ್ಗಳ ಅಭಾವ ಉಂಟಾಗಿತ್ತು.
ಪೆಟ್ರೋಲ್ ಬಂಕ್ ತೆರೆದಿದೆ ಎಂಬ ಮಾಹಿತಿ ತಿಳಿದು ಜನರು ಒಟ್ಟಿಗೇ ಬಂದು ಮುಗಿಬಿದ್ದಿದ್ದರು. ಇನ್ನೊಂದು ವಿಷಯ ಎಂದರೆ, ಈ ಪ್ರದೇಶದ ಸಮೀಪದಲ್ಲಿ ಯಾವುದೇ ಮದ್ಯದಂಗಡಿಗಳು ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
-ವೈರಲ್ ಚೆಕ್