ದಡ್ಡ ಸಾಹಿತಿಗಳಿಗೇಕೆ ಸರ್ಕಾರದ ಮನ್ನಣೆ: ಪ್ರಕಾಶ ಬೆಳವಾಡಿ!

By Web DeskFirst Published Aug 11, 2018, 4:39 PM IST
Highlights

ಸಾಹಿತಿಗಳ ಜನ್ಮ ಜಾಲಾಡಿದ ಪ್ರಕಾಶ ಬೆಳವಾಡಿ! ಸರ್ಕಾರಿ ಕಚೇರಿಗಳಲ್ಲಿ ಸಾಹಿತಿಗಳ ಫೋಟೋಗೆ ಆಕ್ಷೇಪ! ಇತರ ರಂಗಗಳ ಸಾಧಕರನ್ನು ಗುರುತಿಸಬೇಕೆಂದ ಬೆಳವಾಡಿ! ತಮ್ಮನ್ನು ಬಲಪಂಥೀಯ ಎಂದವರಿಗೆ ತಕ್ಕ ಉತ್ತರ

ಬೆಂಗಳೂರು(ಆ.11): ಸರ್ಕಾರಿ ಕಚೇರಿಗಳಲ್ಲಿ ಕೇವಲ ಸಾಹಿತಿಗಳ ಫೋಟೋ ಹಾಕುವುದಕ್ಕೆ ಹಿರಿಯ ನಟ, ನಿರ್ದೇಶಕ, ಸಾಮಾಜಿಕ ಚಿಂತಕ ಪ್ರಕಾಶ ಬೆಳವಾಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಇತರ ರಂಗಗಳಲ್ಲಿಯೂ ಸಾಧನೆ ಮಾಡಿರುವ ಹಲವಾರು ಜನರಿದ್ದು, ಸರ್ಕಾರ ಕೇವಲ ಸಾಹಿತಿಗಳಿಗೆ, ಬುದ್ದಿಜೀವಿಗಳಿಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಬೇಕು ಎಂದು ಬೆಳವಾಡಿ ಆಗ್ರಹಿಸಿದ್ದಾರೆ. ಕೃಷಿ, ವಿಜ್ಞಾನ ಸೇರಿದಂತೆ ಹಲವಾರು ರಂಗಗಳಲ್ಲಿ ಸಾಧಕರಿದ್ದು, ಸರ್ಕಾರ ಅವರನ್ನು ಗುರುತಿಸುವ ಅವಶ್ಯಕತೆ ಇದೆ ಎಂದು ಬೆಳವಾಡಿ ಒತ್ತಾಯಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಹಿತಿಗಳು ಮತ್ತು ಬುದ್ದಿಜೀವಿಗಳ ವಿರುದ್ದ ಹರಿಹಾಯ್ದಿರುವ ಬೆಳವಾಡಿ, ಸರ್ಕಾರದ ಸವಲತ್ತುಗಳಿಗಾಗಿ ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಾಹಿತಿಗಳು ಮತ್ತು ಬುದ್ದಿಜೀವಿಗಳು ನಮ್ಮ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿರುವುದು ದುರದೃಷ್ಟಕರ ಎಂದು ಹೇಳಿದರು.

ಇದೇ ವೇಳೆ ತಮ್ಮನ್ನು ಬಲಪಂಥೀಯ, ಆರ್‌ಎಸ್‌ಎಸ್‌ ಬೆಂಬಲಿಗ, ಮೋದಿ ಭಕ್ತ ಎಂದು ಆರೋಪಿಸುವವರಿಗೂ ಖಡಕ್ ಉತ್ತರ ನೀಡಿದ ಪ್ರಕಾಶ ಬೆಳವಾಡಿ, ನನ್ನ ಸೈದ್ಧಾಂತಿಕ ಬದ್ಧತೆ ಏನೆಂಬುದು ಹೇಳುವ ಅಧಿಕಾರ ಇವರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ದೇಶದ ಉಜ್ವಲ ಭವಿಷ್ಯಕ್ಕಾಗಿ ತಾವು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವುದು ತಮ್ಮ ಹಕ್ಕು ಎಂದು ಅವರು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

click me!