
ನವದೆಹಲಿ (ಜು. 31): ಭಾರತೀಯ ತನಿಖಾಧಿಕಾರಿಗಳಿಂದ ಪಾರಾಗಲು ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಹಾಗೂ ಬಾರ್ಬುಡ ದೇಶದ ಪೌರತ್ವ ಪಡೆದಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಈಗ ಅಲ್ಲೂ ಸಂಕಷ್ಟ ಎದುರಾಗಿದೆ.
ಚೋಕ್ಸಿ ಇರುವಿಕೆಯ ಸುಳಿವು ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರ್ಕಾರ, ಆ್ಯಂಟಿಗಾ ಹಾಗೂ ಬಾರ್ಬುಡ ಸರ್ಕಾರವನ್ನು ಸಂಪರ್ಕಿಸಿ, ಚೋಕ್ಸಿಯನ್ನು ವಶಕ್ಕೆ ಪಡೆಯುವಂತೆ ಕೋರಿಕೊಂಡಿದೆ.
ಆ್ಯಂಟಿಗಾ ಸರ್ಕಾರದ ಜತೆ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವಾಲಯವು, ಚೋಕ್ಸಿಯ ರಸ್ತೆ, ವಿಮಾನ ಹಾಗೂ ಸಮುದ್ರ ಪ್ರಯಾಣಕ್ಕೆ ನಿರ್ಬಂಧ ಹೇರುವಂತೆಯೂ ಒತ್ತಡ ಹೇರಿದೆ.
ಆ್ಯಂಟಿಗಾದಲ್ಲಿ ಚೋಕ್ಸಿ ಇದ್ದಾನೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಕೆರಿಬಿಯನ್ ದ್ವೀಪದ ಜಾರ್ಜ್ಟೌನ್ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಆ್ಯಂಟಿಗಾ ಸರ್ಕಾರಕ್ಕೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿಯೊಂದನ್ನು ನೀಡಿದ್ದು, ಚೋಕ್ಸಿ ಇರುವಿಕೆ ಬಗ್ಗೆ ದೃಢಪಡಿಸುವಂತೆ ಕೋರಿಕೊಂಡಿದ್ದಾರೆ. ಒಂದು ವೇಳೆ ಆತ ಇರುವುದು ನಿಜವೇ ಆದಲ್ಲಿ ವಶಕ್ಕೆ ಪಡೆಯಬೇಕು, ಆತನ ಪ್ರಯಾಣಕ್ಕೆ ನಿರ್ಬಂಧ ಹೇರಬೇಕು ಎಂದು ಕೋರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಯಮ ವಿಸ್ತರಣೆ ನೆಪದಲ್ಲಿ ಆ್ಯಂಟಿಗಾ ಪಾರ್ಸ್ಪೋರ್ಟ್ ಅನ್ನು ಚೋಕ್ಸಿ ಕಳೆದ ವರ್ಷವೇ ಪಡೆದಿರುವ ಮಾಹಿತಿ ತಡವಾಗಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆ್ಯಂಟಿಗಾ ಪಾಸ್ಪೋರ್ಟ್ ಪಡೆದರೆ 132 ದೇಶಗಳಿಗೆ ವೀಸಾ ಇಲ್ಲದೇ ಓಡಾಡಬಹುದಾಗಿದೆ. ಕಳೆದ ಫೆಬ್ರವರಿಯಲ್ಲಿ ಭಾರತ ಸರ್ಕಾರ ಚೋಕ್ಸಿ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಿತ್ತು. ಅದಕ್ಕೂ ಮುನ್ನವೇ ಆತ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದು ಈಗ ಗೊತ್ತಾಗಿದೆ.
13 ಸಾವಿರ ಕೋಟಿ ರು. ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಮುಖ್ಯ ರೂವಾರಿಯಾಗಿರುವ ನೀರವ್ ಮೋದಿಯ ಚಿಕ್ಕಪ್ಪನೇ ಈ ಮೆಹುಲ್ ಚೋಕ್ಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.