ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಕ್ಕಿರುವ ನೆರೆ ರಾಜ್ಯದ ಜನರಿಗೆ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಮೀರ್ ಅಹಮದ್ ಖಾನ್ ಆಹಾರ ಸಾಮಗ್ರಿಗಳನ್ನು ರವಾನಿಸಿದ್ದಾರೆ.
ಆಲಪ್ಪುಳ (ಜು. 31): ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಕ್ಕಿರುವ ಕೇರಳದ ಅಲಪ್ಪುಳ ಜಿಲ್ಲೆಯ ಜನರಿಗೆ, ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಮೀರ್ ಅಹಮದ್ ಖಾನ್ ಆಹಾರ ಸಾಮಗ್ರಿಗಳನ್ನು ರವಾನಿಸಿದ್ದಾರೆ.
ವಿಶೇಷವೆಂದರೆ ಆಲಪ್ಪುಳ ಲೋಕಸಭಾ ಕ್ಷೇತ್ರ, ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿಯಾಗಿರುವ ವೇಣುಗೋಪಾಲ್ ಅವರ ಸ್ವಕ್ಷೇತ್ರ. ವೇಣುಗೋಪಾಲ್ ಅವರ ಕೋರಿಕೆಯ ಅನ್ವಯ ಜಮೀರ್ ಈ ಕೊಡುಗೆ ನೀಡಿದ್ದಾರೆ.
ಭಾನುವಾರ ಲಾರಿ ಮೂಲಕ 50 ಟನ್ ಅಕ್ಕಿ, 10 ಟನ್ ಸಕ್ಕರೆ ಮತ್ತು ೨೫೦ ಕೆಜಿಯಷ್ಟು ಸಾಂಬಾರ್ ಪೌಡರ್ ಅನ್ನು ಸಚಿವ ಜಮೀರ್ ಆಲಪ್ಪುಳದ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಆದರೆ ಈ ಕೊಡುಗೆಯನ್ನು ಜಮೀರ್, ಕರ್ನಾಟಕ ಸರ್ಕಾರದ ಪರವಾಗಿ ನೀಡಿಲ್ಲ. ಬದಲಾಗಿ ವೈಯಕ್ತಿಕವಾಗಿ ನೀಡಿದ್ದಾರೆ. ಈ ಕುರಿತು ವೇಣುಗೋಪಾಲ್ ಅವರಿಗೆ ಪತ್ರ ಬರೆದಿರುವ ಜಮೀರ್, ಈ ಆಹಾರ ಸಾಮಗ್ರಿ ಜನರಿಗೆ ಸೂಕ್ತ ರೀತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಕೋರಿದ್ದಾರೆ ಎಂದು ಮಲೆಯಾಳಂನ ಮನೋರಮಾ ಪತ್ರಿಕೆ ವರದಿ ಮಾಡಿದೆ.