ಸಿಎಂ ಕೋಟೆಯಲ್ಲಿ ಇಂದು ಮೋದಿ ಘರ್ಜನೆ; ಇಂದು ಮೈಸೂರಿನಲ್ಲಿ ರಣಕಹಳೆ ಮೊಳಗಿಸಲಿದ್ದಾರೆ ನಮೋ

By suvarna Web DeskFirst Published Feb 19, 2018, 7:54 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಣಕಹಳೆ ಮೊಳಗಿಸಲು ವೇದಿಕೆ ಸಿದ್ಧವಾಗಿದೆ.

ಮೈಸೂರು (ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಣಕಹಳೆ ಮೊಳಗಿಸಲು ವೇದಿಕೆ ಸಿದ್ಧವಾಗಿದೆ.

15 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ, ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು  ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಬಿಜೆಪಿ ರ‌್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುವ ನಿರೀಕ್ಷೆ ಇದೆ. ಫೆ.4 ರಂದು ಮೋದಿ ಅವರು ಬೆಂಗಳೂರಿನಲ್ಲಿ ಬಿಜೆಪಿ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.

ಮೈಸೂರು ಸಮಾವೇಶದ ಬಳಿಕ ಫೆ.27 ರಂದು ದಾವಣಗೆರೆಯಲ್ಲಿ ರೈತ ಮೋರ್ಚಾ ಸಮಾವೇಶ ಹಾಗೂ ಮಾ.4 ರಂದು ವಿಜಯಪುರದಲ್ಲಿ ನಡೆಯುವ ಬಿಜೆಪಿ ರ‌್ಯಾಲಿಯಲ್ಲೂ ಅವರು ಭಾಗವಹಿಸಲಿದ್ದಾರೆ.
ರಾತ್ರಿಯೇ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಬಿಜೆಪಿ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ಅವರು ಭಾನುವಾರ ರಾತ್ರಿಯೇ ಮೈಸೂರಿನ ರ‌್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋಮವಾರ ಬೆಳಗ್ಗೆ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜತೆಗೆ ಮಾತನಾಡಲಿದ್ದಾರೆ ಎನ್ನಲಾಗಿದೆ. ನಂತರ ಶ್ರವಣಬೆಳಗೊಳಕ್ಕೆ ತೆರಳಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಧ್ಯಾಹ್ನ 3 ಗಂಟೆಗೆ ಮೈಸೂರಿನ ರೈಲು
ನಿಲ್ದಾಣದಲ್ಲಿ ನಡೆಯುವ ರೈಲ್ವೆ ವಿದ್ಯುದೀಕರಣ ಯೋಜನೆ, ನಾಗನಹಳ್ಳಿ ರೈಲ್ವೆ ಟರ್ಮಿನಲ್ ನಿರ್ಮಾಣ ಮತ್ತು ಮೈಸೂರು-ಬೆಂಗಳೂರು ಅಷ್ಟಪಥ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ರ‌್ಯಾಲಿಯಲ್ಲಿ ಮಾತನಾಡಲಿದ್ದಾರೆ.

click me!