
ನವದೆಹಲಿ[ಜು.20]: ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ, ಚೌಧರಿ ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮೊದಲು ಬೆಂಬಲ ನೀಡಿ ಅನಂತರ
ಅಪಮಾನ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷವಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ವಾಗ್ದಾಳಿ ನಡೆಸಿದರು.
ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ಸಂಸತ್ ನಲ್ಲಿ ಮಾತನಾಡಿದ ಅವರು, 1979ರಲ್ಲಿ ಚೌಧರಿ ಚರಣ್ ಸಿಂಗ್ ಗೆ ಮೊದಲು ಬೆಂಬಲ ನೀಡಿ ಆಮೇಲೆ ವಾಪಸ್ ಪಡೆದರು. 1997ರಲ್ಲೂ ಹಾಗೇ ಮೊದಲು ದೇವೇಗೌಡರಿಗೆ ಕಾಂಗ್ರೆಸ್ ನಿಂದ ಬೆಂಬಲ ನೀಡಿ ಅಪಮಾನ ಮಾಡಲಾಯಿತು. ಚಂದ್ರಶೇಖರ್, ಮುಲಾಯಂ ಸಿಂಗ್ ಸಹ ಕಾಂಗ್ರೆಸ್ ನಿಂದ ವಂಚನೆಗೊಳಗಾದರು. ದೇಶದಲ್ಲಿ ಅಸ್ಥಿರತೆ ಉಂಟು ಮಾಡುವ ಕಾಂಗ್ರೆಸ್ ತಂತ್ರವನ್ನು ಮರೆಯಲು ಸಾಧ್ಯವಿಲ್ಲ. ವೋಟು ಬದಲು ನೋಟ್ ಎನ್ನುವ ಸಂಸ್ಕೃತಿ ಕಾಂಗ್ರೆಸ್ ನದ್ದು ಎಂದು ಅನ್ಯಾಯದ ಸರಪಳಿಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟರು.
2019 ರಲ್ಲೂ ನಾವೇ
2019ರಲ್ಲಿ ಮತ್ತೆ ನಾವೇ ಗೆಲ್ಲೋದು. ಆಗ 2024ಕ್ಕೂ ಸಹ ನೀವು ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲೇಬೇಕು. ಕಾಂಗ್ರೆಸ್ ಪಕ್ಷಕ್ಕೆ ತನ್ನ ಬಗ್ಗೆಯೇ ತನಗೆ ಯಾವುದೇ ವಿಶ್ವಾಸ ಇಲ್ಲ. ನಮ್ಮ ಸರ್ಕಾರ ಜಾರಿಗೆ ತಂದ ಸ್ವಚ್ಛ ಭಾರತ್ ಬಗ್ಗೆ ವಿಶ್ವಾಸ ಇಲ್ಲ. ರಿಸರ್ವ್ ಬ್ಯಾಂಕ್, ದೇಶದ ಆರ್ಥಿಕ ವ್ಯವಸ್ಥೆ,ದೇಶದ ಮುಖ್ಯ ನ್ಯಾಯಮೂರ್ತಿ,ಇವಿಎಂ ಬಗ್ಗೆಯೂ ಕಾಂಗ್ರೆಸ್ ನಾಯಕರಿಗೆ ವಿಶ್ವಾಸವೇ ಇಲ್ಲ. ವಿಶ್ವಾಸವಿಲ್ಲದ ಪಕ್ಷವೆಂದರೆ ಕಾಂಗ್ರೆಸ್ ಎಂದು ಹಿನಾಯವಾಗಿ ಜರಿದರು.
ಕಾಂಗ್ರೆಸ್ ನದ್ದು ಬ್ಲ್ಯಾಕ್ ಮೇಲ್ ರಾಜಕಾರಣ
ದಲಿತರು, ಶೋಷಿತರನ್ನು ಬ್ಲ್ಯಾಕ್ ಮೇಲೆ ಮಾಡಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಇದೇ ಪಕ್ಷ. ಸುಳ್ಳು ಹಾಗೂ ವದಂತಿಗಳನ್ನು ಹರಡಿಸುವುದೇ ಇದಕ್ಕೆ ಕರಗತವಾಗಿದೆ. 1980, 1991, 1999ರಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಸಿತ್ತು. ಒಂದು ಕುಟುಂಬದ ಅಧಿಕಾರಕ್ಕೋಸ್ಕರ ಚುನಾವಣೆ ನಡೆಸಿದ್ದು ಇದೇ ಪಕ್ಷವಲ್ಲದೆ ಮತ್ಯಾವುದು ಎಂದು ಪ್ರಶ್ನಿಸಿದರು.
ಸಾಧನೆಗಳ ಬಗ್ಗೆ ವಿವರಣೆ
ಇದೇ ಸಂದರ್ಭದಲ್ಲಿ ತನ್ನ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದ ಪ್ರಧಾನಿ, ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ಯೋಜನೆ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಮೂಲಕ ಆರ್ಥಿಕ ವೃದ್ಧಿ, ಭಾರತದ ಡಿಜಿಟಲ್ ವ್ಯವಸ್ಥೆಯ ಸುಧಾರಣೆ,ಬ್ಯಾಂಕ್ ಗಳ ಬಾಗಿಲು ನೋಡದವರಿಗೆ ಜನಧನ್ ಯೋಜನೆ, ಗ್ಯಾಸ್ ಸಿಲಿಂಡರ್ ಇಲ್ಲದ ಬಡ ಕುಟುಂಬಗಳಿಗೆ ಉಚಿತ ಸಿಲಿಂಡರ್, ಬಡ ಕುಟುಂಬದ ಮಹಿಳೆಯರಿಗಾಗಿ 8 ಕೋಟಿ ಶೌಚಾಲಯ, ಜನತೆ ಆರೋಗ್ಯದ ದೃಷ್ಟಿಯಿಂದ ಆಯುಷ್ಮಾನ್ ಭಾರತ್ ಯೋಜನೆ, 15 ಕೋಟಿ ರೈತರುಗಳಿಗೆ ಕಿಸಾನ್ ಕಾರ್ಡ್ ಮುಂತಾದ ಅಭಿವೃದ್ಧಿ ಯೋಜನೆಗಳ ಜಾರಿಗೊಳಿಸಿದ್ದು ನಮ್ಮ ಸರ್ಕಾರ ಎಂದು ಸಂಸತ್ತಿನಲ್ಲಿ ವಿವರಣೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.