
ಬೆಂಗಳೂರು (ಅ.10): ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಗೋಪ್ಯವಾಗಿರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿಲ್ಲ. ಯೋಜನೆ ಅನುಷ್ಠಾನಕ್ಕೂ ಮುನ್ನ ಬಿಡಿಎ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ಕುರಿತಾದ ಲೆಕ್ಕಪತ್ರಗಳನ್ನು ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನವು ರಿಟ್ ಅರ್ಜಿ ಸಲ್ಲಿಸಿದ್ದು, ಉಚ್ಛ ನ್ಯಾಯಾಲಯವು ಅರ್ಜಿ ಮೇಲಿನ ತೀರ್ಪು ಆಧರಿಸಿಯೇ ಯೋಜನೆ ಅನುಷ್ಠಾನಗೊಳಿಸುವಂತೆ ತಾಕೀತು ಮಾಡಿದೆ.
ಯೋಜನೆಗೆ ತಡೆ ನೀಡುವಂತೆ ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಯೋಜನೆಯು ರಿಟ್ ಅರ್ಜಿಯ ಆದೇಶಕ್ಕೆ ಅನ್ವಯವಾಗಿರುತ್ತದೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಸೇತುವೆ ನಿರ್ಮಾಣಕ್ಕೆ ಒಟ್ಟು ರೂ.1800 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಮೇಕ್ರಿ ವೃತ್ತದ ಮೂಲಕ ಹಾದು ಹೋಗುವ ಈ ಉಕ್ಕಿನ ಸೇತುವೆಯ ವಿವರವಾದ ಯೋಜನಾ ವರದಿ(ಡಿಪಿಆರ್), ಕಾರ್ಯ ಸಾಧ್ಯತೆ, ಯೋಜನೆಗೆ ಹಣಕಾಸು ಹೊಂದಾಣಿಕೆ ಇವುಗಳ ಕುರಿತಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿಲ್ಲ. ಹೀಗಾಗಿ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿ ಹೊಂದಿರದೇ ಸ್ವೇಚ್ಛೆಯಿಂದ, ಕಾನೂನುಬಾಹಿರವಾಗಿ, ತರ್ಕರಹಿತವಾಗಿ ರೂಪಿತವಾಗಿರುವಂತಿದೆ. ಯೋಜನೆಯ ಕ್ರಮಬದ್ಧತೆಯೂ ಸಂಶಯಾಸ್ಪದವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಒಟ್ಟು 6.7ಕಿಮೀ ಉದ್ದದ ಉಕ್ಕಿನ ಮೇಲ್ಸೆತುವೆಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು ವಿಮಾನ ನಿಲ್ಧಾಣಕ್ಕೆ ಜೋಡಿಸಲು ಉದ್ದೇಶಿಸಲಾಗಿದೆ. ಮೊದಲು ರೂ.1350 ಕೋಟಿ ಇದ್ದ ಯೋಜನೆ ರೂ.1800ಕೋಟಿಗೆ ಏರಿಕೆಯಾಗಿದ್ದು 24 ತಿಂಗಳಲ್ಲಿ ಪೂರ್ಣಗೊಳ್ಳುವುದಾಗಿ ಹೇಳಲಾಗಿದೆ. 55 ಸಾವಿರ ಟನ್ ಉಕ್ಕು ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ವಾಹನಗಳ ದಟ್ಟಣೆ ಕಡಿಮೆ ಮಾಡಲು ಈ ಸೇತುವೆ ನಿರ್ಮಾಣ ಮಾಡುತ್ತಿದ್ದು ನಿರ್ಮಾಣ ಸಂಸ್ಥೆ ಲಾರ್ಸೆನ್ ಅಂಡ್ ಟಬೋ ಟೆಂಡರ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಒಟ್ಟು ಯೋಜನೆಯಲ್ಲಿ ಪಾರದರ್ಶಕತೆ ಕಂಡು ಬರುತ್ತಿಲ್ಲ. ಸಾರ್ವಜನಿಕವಾಗಿಯೂ ಯೋಜನೆ ಸಾಧಕ ಬಾಧಕ ಕುರಿತು ಚರ್ಚೆ ನಡೆಸಲಾಗಿಲ್ಲ. ಯೋಜನೆ ಕುರಿತಾಗಿ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆ ಹಾಗೂ ಯೋಜನೆಯ ವಿವರಗಳು ತಾಳೆಯಾಗುತ್ತಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಯೋಜನೆಯ ಅನುಷ್ಠಾನ ಕುರಿತ ಯಾವುದೇ ಅಂಶಗಳ ಮಾಹಿತಿ ಸಾರ್ವಜನಿಕರ ಪರಿಶೀಲನೆಗೆ ದೊರೆಯುತ್ತಿಲ್ಲವೆಂದು ಅರ್ಜಿ ತಿಳಿಸಿದೆ.
ಶೇ.40ರಷ್ಟುಹೆಚ್ಚು ವೆಚ್ಚ: ಯೋಜನೆಯನ್ನು ಇದೀಗ ಅಂದಾಜಿಸಿರುವ ವೆಚ್ಚಕ್ಕಿಂತಲೂ ಶೇ.40ರಷ್ಟುಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದೆಂದು ಕೆಲವು ತಜ್ಞರು ಅಂದಾಜಿಸಿದ್ದು ಯೋಜನೆಯ ವೆಚ್ಚವನ್ನು ಯಾವ ಮೂಲಗಳಿಂದ ಭರಿಸಲಾಗುತ್ತಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲದಾಗಿದೆ. ಸೇತುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ. ಭೂ ಸ್ವಾಧೀನ ಮಾಡದೇ ಆರಂಭಿಸುವ ಬಹುತೇಕ ಯೋಜನೆಗಳು ಅರ್ಧದಲ್ಲೇ ಸ್ಥಗಿತಗೊಂಡ ಉದಾಹರಣೆಗಳಿದ್ದು ಈ ಯೋಜನೆಗೂ ಅದೇ ಗತಿ ಉಂಟಾಗಬಹುದು ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.